Publish Date: Sun, 12 Nov 2023 (10:08 IST)
Updated Date: Sun, 12 Nov 2023 (10:08 IST)
ಕಾಸರಗೋಡು: ಗಡಿನಾಡು ಕಾಸರಗೋಡಿನ ಅನಂತಪುರ ಶ್ರೀ ಪದ್ಮನಾಭ ಕ್ಷೇತ್ರದಲ್ಲಿ ಮತ್ತೊಂದು ದೇವರ ಮೊಸಳೆ ಪ್ರತ್ಯಕ್ಷವಾಗಿದೆ.
ಸರೋವರ ದೇವಾಲಯ ಎಂದೇ ಪ್ರಸಿದ್ಧಿಯಾಗಿರುವ ಅನಂತಪುರದಲ್ಲಿ ಬಬಿಯಾ ಎಂಬ ದೇವರ ಮೊಸಳೆಯಿತ್ತು. ಇದು ಏಕೈಕ ಸಸ್ಯಾಹಾರಿ ಮೊಸಳೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಈ ಮೊಸಳೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ದೇವರ ಗರ್ಭಗುಡಿಯ ಎದುರು ಬಂದು ಪ್ರಾಣ ಬಿಟ್ಟಿತ್ತು.
ಇದೀಗ ಒಂದು ವರ್ಷದ ಬಳಿಕ ಅದೇ ಜಾಗದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ದೇವಾಲಯಕ್ಕೆ ಭೇಟಿ ನೀಡಿದ್ದ ಕುಟುಂಬವೊಂದಕ್ಕೆ ಇದು ಮೊದಲ ಬಾರಿಗೆ ದರ್ಶನ ನೀಡಿದೆ. ಮಗುವೊಂದು ಮೊಸಳೆ ನೋಡಬೇಕೆಂದು ಹಠ ಹಿಡಿಯುತ್ತಿದ್ದಾಗ ಕುಟುಂಬಸ್ಥರು ಮೊಸಳೆ ಇಲ್ಲವೆಂದು ಸಮಾಧಾನ ಪಡಿಸುತ್ತಿದ್ದರು. ಈ ವೇಳೆ ಹೊಸ ಮೊಸಳೆ ಪ್ರತ್ಯಕ್ಷವಾಗಿದೆ! ಬಳಿಕ ಆ ಕುಟುಂಬಸ್ಥರು ಅದನ್ನು ದೇವಾಲಯದ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದ್ದಾರೆ. ಆದರೆ ಮೊದಲು ಯಾರೂ ಇದನ್ನು ನಂಬಿರಲಿಲ್ಲ. ವಿಶೇಷವೆಂದರೆ ಮತ್ತೆ ಅದೇ ಕುಟುಂಬಕ್ಕೆ ಆ ಮೊಸಳೆ ದರ್ಶನ ನೀಡಿದೆ. ಈ ಬಾರಿ ವಿಡಿಯೋ ಕೂಡಾ ಚಿತ್ರೀಕರಿಸಿದ್ದಾರೆ. ಇದೀಗ ಆಡಳಿತ ಮಂಡಳಿ ಕೂಡಾ ಹೊಸ ಮೊಸಳೆಯಿರುವುದು ನಿಜವೆಂದು ಒಪ್ಪಿಕೊಂಡಿದೆ. ಮೊಸಳೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.