Publish Date: Wed, 19 Jan 2022 (18:42 IST)
Updated Date: Wed, 19 Jan 2022 (18:48 IST)
ಮಗುವಿಗೆ ಮದ್ಯ ಕುಡಿಸಿ ತಾಯಿಯ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆಂಬ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬಸವೇಶ್ವರನಗರ ಠಾಣೆ ಇನ್ಸ್ಪೆಕ್ಟರ್ ಐದು ಮಂದಿಗೆ ನೋಟಿಸ್ ನೀಡಿದ್ದಾರೆ.
ಸಂತ್ರಸ್ಥೆ ಪತಿ ಸುನೀಲ್ಕುಮಾರ್, ಅತ್ತೆ ಮಲ್ಲಿಗಾ, ಮಾವ ಪಳನಿ, ಭಾವ ಶಾಂತಕುಮಾರ್ ಹಾಗೂ ಈತನ ಪತ್ನಿ ಸರಿತಾ ವಿರುದ್ಧ ಎಫ್ಐಆರ್ ದಾಖಲಾಗಿದ್ದು , ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಈ ಕುಟುಂಬದ ಸದಸ್ಯರು ಮದ್ಯದ ಚಟ ಹೊಂದಿದ್ದು , ಮನೆಯಲ್ಲಿಯೇ ಒಟ್ಟಾಗಿ ಮದ್ಯಪಾನ ಮಾಡುತ್ತಿದ್ದರು. ಶಾಂತಕುಮಾರ್-ಸರಿತಾ ದಂಪತಿಗೆ ಮಕ್ಕಳಿರಲಿಲ್ಲ. ಈ ನಡುವೆ ಸುನೀಲ್ಕುಮಾರ್ ಅತ್ತಿಗೆ ಸರಿತಾ ಜೊತೆ ಸಂಬಂಧವಿಟ್ಟುಕೊಂಡ ಬಗ್ಗೆ ಸಂತ್ರಸ್ಥೆ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದರು.
ಸುನೀಲ್ಗೆ ಸಂತ್ರಸ್ಥೆ ಪೋಷಕರು ಬುದ್ಧಿವಾದ ಹೇಳಿದ್ದರಿಂದ ಅವರೊಂದಿಗೂ ಜಗಳವಾಡಿಕೊಂಡು ಬಂದಿದ್ದ. ಈತನ ಅಪ್ಪ-ಅಮ್ಮ ಸಹ ಅದಕ್ಕೆ ಸಹಕರಿಸುತ್ತಿದ್ದರು ಎನ್ನಲಾಗಿದೆ.
ಮನೆಯಲ್ಲಿ ಒಟ್ಟಾಗಿ ಈ ಕುಟುಂಬದ ಸದಸ್ಯರು ಮದ್ಯ ಸೇವಿಸುವ ವೇಳೆ ಸಂತ್ರಸ್ಥೆಯ ಮೂರು ವರ್ಷದ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿರುವುದಲ್ಲದೆ ಸಂತ್ರಸ್ಥೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಬಸವೇಶ್ವರನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಐದು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.