Publish Date: Sat, 04 Aug 2018 (14:03 IST)
Updated Date: Sat, 04 Aug 2018 (14:28 IST)
ಕೊಡಗು ಜಿಲ್ಲೆಯಲ್ಲಿ ಅಕ್ರಮ ಹೋಂ ಸ್ಟೇಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.
ಹೋಂ ಸ್ಟೇಗಳ ನೋಂದಾವಣೆಗೆ ಅವರು ಈ ಮೊದಲು ಆಗಸ್ಟ್ 2ರ ಗಡುವು ನೀಡಿದ್ದರು. ಆದರೆ ಬಹುತೇಕ ಹೋಂ ಸ್ಟೇಗಳು ಸಚಿವರು ನೀಡಿರುವ ಗಡುವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಈ ಹೋಂ ಸ್ಟೇಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಮೂಲಕ ಜಂಟಿ ಕಾರ್ಯಾಚರಣೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಅವರು ಇದೇ ಮೊದಲ ಬಾರಿಗೆ ಮಡಿಕೇರಿಗೆ ಭೇಟಿ ನೀಡಿದ ಹಿನ್ನಲೆ ಕುಶಾಲನಗರದ ಹಾಗೂ ಮಡಿಕೇರಿ ಮುಖ್ಯ ದ್ವಾರದ ಬಳಿ ಇರುವ ಕಾವೇರಿ ಪ್ರತಿಮೆಗೆ ಹೂವಿನ ಮಾಲಾರ್ಪಣೆ ಮಾಡಿದರು. ಮಡಿಕೇರಿಗೆ ಆಗಮಿಸಿದ ಸಚಿವ ಸಾ.ರಾ.ಮಹೇಶ್ ಅವರು ವೀರ ಸೇನಾನಿಗಳ ಪ್ರತಿಮೆಗೆ ಮಲಾರ್ಪಣೆ ನೆರವೇರಿಸಿದರು. ಬಳಿಕ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ತಮ್ಮ ಹೊಸ ಕಚೇರಿ ಉದ್ಘಾಟಿಸಿದರು.
ಇನ್ನುಮುಂದೆ ತಿಂಗಳ ಪ್ರತಿ ಎರಡನೇ ಶುಕ್ರವಾರ ತಾವು ಮಡಿಕೇರಿ ಕಚೇರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿರುವುದಾಗಿ ತಿಳಿಸಿದರು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು.