Publish Date: Sun, 23 Jun 2019 (10:45 IST)
Updated Date: Sun, 23 Jun 2019 (10:51 IST)
ಬೆಂಗಳೂರು : ನಾಳೆ ನೂತನ ಸಚಿವರಾದ ನಾಗೇಶ್ ಹಾಗೂ ಆರ್ ಶಂಕರ್ ಅವರಿಗೆ ಖಾತೆ ಹಂಚಿಕೆ ಮಾಡುವ ಸಾಧ್ಯತೆಯಿದೆ ಎಂಬುದಾಗಿ ತಿಳಿದುಬಂದಿದೆ.
ಗ್ರಾಮ ವಾಸ್ತವ್ಯಕ್ಕೂ ಮುನ್ನ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ನೂತನ ಸಚಿವರಾದ ನಾಗೇಶ್, ಆರ್ ಶಂಕರ್ ಮಾತುಕತೆ ನಡೆಸಿದ್ದು, ಸಿಎಂ ಸೋಮವಾರ ಖಾತೆ ಹಂಚಿಕೆ ಮಾಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ನಾಗೇಶ್ ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆಯನ್ನು ನೀಡುವಂತೆ ಕೈನಾಯಕರ ಒತ್ತಡ ಹಾಕಿದ್ದಾರೆ. ಅಲ್ಲದೇ ಅಬಕಾರಿ ಖಾತೆ ನೀಡುವಂತೆಯೂ ಕೆಲವರಿಂದ ಒತ್ತಡವಿದೆ ಎನ್ನಲಾಗಿದೆ. ಆದ್ರೆ ಶಿಕ್ಷಣ ಖಾತೆಯನ್ನು ನೀಡಲು ಜೆಡಿಎಸ್ ನಲ್ಲಿ ಸಹಮತವಿಲ್ಲ ಎಂದ ಸಿಎಂ, ಅಬಕಾರಿ ಖಾತೆ ನೀಡಲೂ ಕೆಲವೊಂದಿಷ್ಟು ಸಮಸ್ಯೆಗಳಿವೆ ಎಂದು ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಹಾಗೇ ಆರ್. ಶಂಕರ್ ಗೆ ಪೌರಾಡಳಿತ ಖಾತೆ ನೀಡಲು ಸಿಎಂ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಹೀಗಾಗಿ ಕೈ ನಾಯಕರ ಮೂಲಕ ನೂತನ ಸಚಿವರು ಸಿಎಂ ಒತ್ತಡ ಹಾಕಿದ್ದು, ಗ್ರಾಮ ವಾಸ್ತವ್ಯದ ನಂತರ ಖಾತೆ ಹಂಚಿಕೆ ಮಾಡುವ ಭರವಸೆ ಸಿಎಂ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ನಾಳೆ ಖಾತೆ ಹಂಚಿಕೆ ಫೈನಲ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.