Publish Date: Thu, 23 Feb 2023 (16:28 IST)
Updated Date: Thu, 23 Feb 2023 (16:31 IST)
ರಸ್ತೆ ಅಗಲೀಕರಣ ಮತ್ತು ಲೇಔಟ್ ನಿರ್ಮಾಣಕ್ಕೆ ಅಧಿಕಾರಿಗಳು ಸ್ಪಂದಿಸದ ಕಾರಣ ಪ್ರತಿಭಟನಾರ್ಥವಾಗಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗುಡ್ಡತೋಟ ಗ್ರಾಮ ಪಂಚಾಯಿತಿಯ 10 ಮಂದಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ 10 ಜನ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ತಾಲೂಕು ಪಂಚಾಯಿತಿ ಇಓಗೆ ಕಳುಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನನೊಂದು ಈ ಕ್ರಮ ಕೈಗೊಂಡಿರುವುದಾಗಿ ಸದಸ್ಯರು ತಿಳಿಸಿದ್ದಾರೆ. ರಸ್ತೆ ಅಗಲೀಕರಣ, ಲೇಔಟ್ ನಿರ್ಮಾಣ, ಮಳೆಯಿಂದಾಗಿ ಕುಸಿದಿದ್ದ 17 ಮನೆಗಳಿಗೆ ಇತೆರೆಡೆ ಜಾಗ ನೀಡುವುದು ಸೇರಿದಂತೆ ತುರ್ತು ಕೆಲಸಗಳಿಗೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಸದಸ್ಯರು ದೂರಿದ್ದಾರೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಾಧ್ಯವಾಗದ ಕಾರಣ ರಾಜೀನಾಮೆ ನೀಡುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.