Publish Date: Fri, 27 Oct 2017 (09:33 IST)
Updated Date: Fri, 27 Oct 2017 (09:36 IST)
ಬೆಂಗಳೂರು: ಎರಡನೇ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕು ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದಾರೆ.
ಮೂರು ದಿನದಿಂದಲೂ ಬಿಗ್ ಮನೆಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಜಗಳದ ಮೇಲೆ ಜಗಳ ನಡೆಯುತ್ತಿದೆ. ಯಾರಲ್ಲೂ ಹೊಂದಾಣಿಕೆ ಕಾಣುತ್ತಿಲ್ಲ. ಬಿಗ್ಬಾಸ್ ಮನೆಯ ಹಿರಿಯ ಸಿಹಿ ಕಹಿ ಚಂದ್ರು ಸಾಮಾನ್ಯ ಕಂಟೆಸ್ಟಂಟ್ ದಿವಾಕರ್ ಮೇಲೆ ಹರಿಹಾಯ್ದಿದ್ದರು. ಚಂದ್ರು ಉಗ್ರ ಪ್ರತಾಪ ಹೇಗಿತ್ತು ಎಂದರೆ, ಒಂದು ಹಂತಕ್ಕೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇದು ಹೋಗಿತ್ತು.
ನಿನ್ನೆ ಸಹ ದೊಡ್ಮನೆಯಲ್ಲಿ ಅದೇ ವಾತಾವರಣ ಮುಂದುವರೆಯಿತು. ಒಂದು ಹಂತದವರೆಗೆ ಚನ್ನಾಗಿಯೇ ಗೇಮ್ ಆಡಿದ ದಯಾಳು ಪದ್ಮನಾಭ್, ತಮ್ಮ ತಂಡದ ಸಹ ಸದಸ್ಯ ರಿಯಾಜ್ ವಿರುದ್ಧ ಜಗಳ ಮಾಡಿಕೊಂಡ್ರು. ಎಥಿಕ್ಸ್ ಇಲ್ಲದೆ ಆಟ ಆಡುವುದು ಸರಿಯಲ್ಲ. ತಂಡದ ಕ್ಯಾಪ್ಟನ್ ಮಾತು ಕೇಳುತ್ತಿಲ್ಲ ಎಂದು ಬಿಪಿ ರೈಸ್ ಮಾಡಿಕೊಂಡ್ರು. ಪ್ರತಿವಾದಕ್ಕೆ ನಿಂತ ರಿಯಾಜ್ ಅವರಿಗೆ ತುಚ್ಛ ಪದಗಳಿಂದ ನಿಂದಿಸಿದ್ರು. ಇದೇ ವೇಳೆ ಮಧ್ಯ ಪ್ರವೇಶಿಸಿದ ದಿವಾಕರ್ ಮೇಲೆಯೂ ಹರಿಹಾಯ್ದರು ದಯಾಳು. ಕೊನೆಗೆ ಆಟವನ್ನು ಬಿಟ್ಟು ಹೊರನಡೆದ್ರು. ಒಂದೆಡೆ ದಯಾಳು ತಮ್ಮ ಸಹ ಸದಸ್ಯರ ಕಾರ್ಯಕ್ಕೆ ಬೇಸರವಾಗಿ ಕಣ್ಣೀರಿಟ್ಟರು.
ಇದುವರೆಗೂ ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಕಂಟೆಸ್ಟಂಟ್ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿದ್ದ ಬೇಸರ ನಿನ್ನೆ ಸ್ಫೋಟಗೊಂಡಿದೆ. ಮನೆಯಲ್ಲಿ ಸಾಮಾನ್ಯ ಸ್ಪರ್ಧಿಗಳನ್ನು ಕೀಳಾಗಿ ಕಾಣುತ್ತಿದ್ದಾರೆ. ಗೌರವ ನೀಡದೆ, ಎರಡು ಗುಂಪುಗಳಾಗಿವೆ ಎಂದು ದಿವಾಕರ್ ಹಾಗೂ ರಿಯಾಜ್ ಓಪನ್ ಆಗಿಯೇ ಹೇಳಿಕೊಂಡ್ರು.