ಬೆಂಗಳೂರು: ಮನರಂಜನೆಗಾಗಿ ಲಾಂಗ್ ಹಿಡಿದು ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಬಿಗ್ಬಾಸ್ ಖ್ಯಾತಿಯ ನಟರಾದ ರಜತ್ ಮತ್ತು ವಿನಯ್ ಗೌಡ ಅವರು ಇಂದು ಬಸವೇಶ್ವರ ನಗರದ ಪೊಲೀಸ್ ಠಾಣೆಗೆ ಜೊತೆಯಾಗಿ ಹಾಜರಾದರು.
ರಜತ್ ಮತ್ತು ವಿನಯ್ ಗೌಡ ಅವರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ಅವರು ರೀಲ್ಸ್ನಲ್ಲಿ ನಕಲಿ ಲಾಂಗ್ ಬಳಸಿರುವುದಾಗಿ ಹೇಳಿದ್ದರಿಂದ ರಾತ್ರಿ ಬಿಡುಗಡೆ ಮಾಡಲಾಗಿತ್ತು. ಈ ಮಧ್ಯೆ ಅವರು ಬಳಸಿರುವ ಲಾಂಗ್ನ ಅಸಲಿಯತ್ತಿನ ಬಗ್ಗೆ ತನಿಖೆ ನಡೆಯುತ್ತಿದೆ.
ಮಚ್ಚು ಹಿಡಿದರುವ ರೀಲ್ಸ್ನಲ್ಲಿ ಕರಿಯ ಚಿತ್ರದ ದರ್ಶನ್ ಸ್ಟೈಲ್ನಲ್ಲಿ ರಜತ್ ಕಾಣಿಸಿಕೊಂಡಿದ್ರೆ, ಪುಷ್ಪರಾಜ್ ಲುಕ್ನಲ್ಲಿ ವಿನಯ್ ಕಾಣಿಸಿಕೊಂಡು ಒಟ್ಟಾಗಿ ರೀಲ್ಸ್ ಮಾಡಿದ್ದರು. ಈ ರೀಲ್ಸ್ ಇದೀಗ ಅವರಿಗೆ ಕಾನೂನು ಸಂಕಷ್ಟ ತಂದಿದೆ. ಲಾಂಗ್ ಹಿಡಿದಿಕ್ಕೆ ಇಬ್ಬರ ಮೇಲೆಯೂ ಎಫ್ಐಆರ್ ದಾಖಲಾಗಿದೆ.
ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇಂದು ಮತ್ತೆ ಅವರಿಬ್ಬರ ವಿಚಾರಣೆ ನಡೆಯುತ್ತಿದೆ. ಅವರು ಬಳಸಿದ್ದ ಮತ್ತು ಠಾಣೆಗೆ ಒಪ್ಪಿಸಿದ ಲಾಂಗ್ಗಳನ್ನು ಪರಿಶೀಲನೆ ನಡೆಯುತ್ತಿದೆ.
ಆರೋಪಿಗಳಿಂದ ಸೀಜ್ ಮಾಡಿದ ಮಚ್ಚಿಗೂ, ರೀಲ್ಸ್ನಲ್ಲಿನ ಮಚ್ಚಿಗೂ ವ್ಯತ್ಯಾಸ ಇದ್ಯಾ? ಈ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತಜ್ಞರನ್ನ ಕರೆಸಿ ವೆಪನ್ ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಸೀಜ್ ಮಾಡಿರುವ ಮಚ್ಚಿಗೆ ಶೈನಿಂಗ್ ಕೋಟಿಂಗ್ ಇರೋದು ಪತ್ತೆಯಾಗಿದೆ. ಆದರೆ ಆರೋಪಿಗಳು ರೀಲ್ಸ್ನಲ್ಲಿ ಹಿಡಿದಿರೋದು ತುಕ್ಕು ಹಿಡಿದಿರುವ ಮಚ್ಚಿನಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಪೊಲೀಸರು ರೀಲ್ಸ್ನ ಮಚ್ಚು ಹಾಗೂ ಸೀಜ್ ಮಾಡಿದ ಮಚ್ಚು ಎರಡೂ ಒಂದೇನಾ? ಅದು ಬೇರೆ, ಇದು ಬೇರೆನಾ ಅನ್ನೋ ಪರಿಶೀಲನೆ ಮಾಡುತ್ತಿದ್ದಾರೆ.
ರೀಲ್ಸ್ನಲ್ಲಿ ಮಾಡಿರೋದನ್ನ ಹಾಗೂ ವಶಪಡಿಸಿಕೊಂಡ ಲಾಂಗ್ ಅನ್ನು ಹೋಲಿಕೆ ಮಾಡಲಾಗುತ್ತೆ. ಒಂದು ವೇಳೆ ಒರಿಜಿನಲ್ ಆಗಿದ್ರೆ ಮುಂದಿನ ತನಿಖೆ ಮಾಡುತ್ತೇವೆ. ಅಗತ್ಯ ಬಿದ್ರೆ ಮತ್ತೆ ನೋಟಿಸ್ ಕೊಟ್ಟು ಕರೆಸಿ ವಿಚಾರಣೆ ಮಾಡ್ತೇವೆ ಎಂದು ಕಮಿಷನರ್ ಬಿ ದಯಾನಂದ ಹೇಳಿದ್ದರು. ಅದರ ಬೆನ್ನಲ್ಲೇ ಮತ್ತೆ ರಜತ್ ಮತ್ತು ವಿನಯ್ ಠಾಣೆಗೆ ಹಾಜರಾದರು.