Publish Date: Thu, 27 Jun 2024 (15:09 IST)
Updated Date: Thu, 27 Jun 2024 (15:11 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾದ ಮೇಲೆ ಸುಮಲತಾ ಅಂಬರೀಶ್ ಎಲ್ಲೂ ಹೊರಗೆ ಕಾಣಿಸಿಕೊಂಡೇ ಇಲ್ಲ. ದರ್ಶನ್ ಕುರಿತಾಗಿಯೂ ಎಲ್ಲೂ ಹೇಳಿಕೆ ನೀಡಿಲ್ಲ. ಬಹುಶಃ ಏನನ್ನೂ ಹೇಳುವ ಮನಸ್ಥಿತಿಯಲ್ಲೂ ಇಲ್ಲ ಎನ್ನಬಹುದು.
ದರ್ಶನ್ ರನ್ನು ಸುಮಲತಾ ತಮ್ಮ ದೊಡ್ಡ ಮಗ ಎಂದೇ ಹೇಳುತ್ತಿದ್ದರು. ಸುಮಲತಾ ಎಲ್ಲೇ ಹೋದರೂ, ಏನೇ ನಿರ್ಧಾರ ತೆಗೆದುಕೊಂಡರೂ ದರ್ಶನ್ ಜೊತೆಗೇ ಇರುತ್ತಿದ್ದರು. ಅವರ ರಾಜಕೀಯ ಜೀವನದ ನಿರ್ಧಾರಗಳಲ್ಲೂ ದರ್ಶನ್ ಜೊತೆಗೇ ಸಾಥ್ ಕೊಟ್ಟಿದ್ದರು.
ಆದರೆ ಈಗ ದರ್ಶನ್ ಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಪಾಲಾಗಿದ್ದಾರೆ. ಆದರೆ ದತ್ತು ಮಗನ ಬಗ್ಗೆ ಸುಮಲತಾ ಆಗಲೀ ಪುತ್ರ ಅಭಿಷೇಕ್ ಆಗಲೀ ಒಂದೇ ಒಂದು ಹೇಳಿಕೆ, ಸೋಷಿಯಲ್ ಮೀಡಿಯಾ ಸ್ಟೇಟಸ್ ಹಾಕಿಲ್ಲ.ಇದರ ಬಗ್ಗೆ ಅವರನ್ನು ಕೆಲವರು ಟೀಕೆ ಮಾಡುತ್ತಲೂ ಇದ್ದಾರೆ.
ಈ ನಡುವೆ ಸುಮಲತಾ ಇಂದು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಜೊತೆಗಿರುವ ಅಭಿಷೇಕ್ ಫೋಟೋವೊಂದನ್ನು ಹಂಚಿಕೊಂಡಿದ್ದು ಇದಕ್ಕೆ ಆಲ್ವೇಯ್ಸ್ (ಎಂದೆಂದಿಗೂ) ಎಂದು ಬರಹವನ್ನೂ ಬರೆದಿದ್ದಾರೆ. ಇದನ್ನು ನೋಡುತ್ತಿದ್ದರೆ ದರ್ಶನ್ ಕೃತ್ಯದಿಂದ ಸುಮಲತಾ ಬೇಸರಗೊಂಡು ಇಂತಹದ್ದೊಂದು ಪೋಸ್ಟ್ ಹಾಕಿದರಾ ಎಂಬ ಅನುಮಾನ ಮೂಡುವಂತಿದೆ. ಇನ್ನು ಕೆಲವರು ದರ್ಶನ್ ಬಗ್ಗೆ ಒಂದೇ ಒಂದು ಮಾತನಾಡದೇ ಕೇವಲ ತಮ್ಮ ಸ್ವಂತ ಮಗನ ಬಗ್ಗೆ ಮಾತ್ರ ಸ್ಟೇಟಸ್ ಹಾಕಿಕೊಂಡಿದ್ದಾರೆ ಎಂದು ಟೀಕೆಯನ್ನೂ ಮಾಡಿದ್ದಾರೆ.