Publish Date: Thu, 04 Jul 2024 (10:04 IST)
Updated Date: Thu, 04 Jul 2024 (10:10 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಯೂರಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳಿಗೆ ಈಗ ಅವರೇ ಬ್ರೇಕ್ ಹಾಕಿದ್ದಾರೆ. ಅಷ್ಟಕ್ಕೂ ಇಂತಹದ್ದೊಂದು ಸುದ್ದಿ ಹರಡಲು ಕಾರಣವಾಗಿದ್ದು ಅವರ ಸೋಷಿಯಲ್ ಮೀಡಿಯಾ ಪೇಜ್.
ಕಿರುತೆರೆಯ ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮಯೂರಿ ಸ್ಯಾಂಡಲ್ ವುಡ್ ನಲ್ಲಿ ಕೃಷ್ಣಲೀಲಾ, ಕರಿಯಾ 2, ಇಷ್ಟಕಾಮ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸಿನಿ ರಸಿಕರಿಗೆ ಚಿರಪರಿಚಿತರಾಗಿದ್ದಾರೆ. ಇದೀಗ ಕಿರುತೆರೆಯಲ್ಲಿ ನನ್ನ ದೇವರು ಎನ್ನುವ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಇತ್ತೀಚೆಗೆ ನಟಿ ಮಯೂರಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿತ್ತು. ಚಂದನ್ ಶೆಟ್ಟಿ, ಯುವರಾಜ್ ಕುಮಾರ್ ದಾಂಪತ್ಯ ವಿರಸದ ಬಳಿಕ ಈ ದಂಪತಿಯ ಸುದ್ದಿ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇದಕ್ಕೆ ಕಾರಣವಾಗಿದ್ದು, ಮಯೂರಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪತಿ ಅರುಣ್ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದು.
ಆದರೆ ಇಂತಹದ್ದೊಂದು ಸುದ್ದಿ ಹಬ್ಬುತ್ತಿದ್ದಂತೇ ಸ್ಪಷ್ಟನೆ ನೀಡಿದ ಮಯೂರಿ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಫೋಟೋ ಡಿಲೀಟ್ ಮಾಡಿದ ತಕ್ಷಣ ಈಗೆಲ್ಲಾ ದಂಪತಿ ನಡುವೆ ಸರಿಯಿಲ್ಲ ಎಂದೇ ಜನ ಅಂದುಕೊಳ್ಳುತ್ತಿದ್ದಾರೆ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಇಂತಹ ಸುದ್ದಿಗಳೆಲ್ಲಾ ಸುಳ್ಳು ಎಂದಿದ್ದಾರೆ.
ಮಯೂರಿ ಮತ್ತು ಅರುಣ್ ಕುಮಾರ್ 10 ವರ್ಷಗಳಿಂದ ಪ್ರೀತಿಸಿ ನಾಲ್ಕು ವರ್ಷಗಳ ಹಿಂದಷ್ಟೇ ಮನೆಯವರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇದೀಗ ಓರ್ವ ಪುತ್ರನೂ ಇದ್ದಾನೆ.