Publish Date: Sat, 22 Jun 2024 (11:56 IST)
Updated Date: Sat, 22 Jun 2024 (11:59 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡಗೆ ಈಗ ಜೈಲಿನ ವಾತಾವರಣದಲ್ಲಿ ಊಟ ಬರುತ್ತಿಲ್ಲ, ನಿದ್ರೆಯಿಲ್ಲ ಎನ್ನುವ ಪರಿಸ್ಥಿತಿಯಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ಎರಡು ದಿನಗಳಿಂದ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಡಿ ಬ್ಲಾಕ್ ನ ಬ್ಯಾರಕ್ ನಲ್ಲಿ ಅವರನ್ನು ಇರಿಸಲಾಗಿದೆ. ಯಾವುದೇ ವಿಶೇಷ ಟ್ರೀಟ್ ಮೆಂಟ್ ಕೊಡಲಾಗಿಲ್ಲ.
ಪವಿತ್ರಾ ಜೊತೆಗೆ ಇತರೆ 8 ಕೈದಿಗಳಿದ್ದಾರೆ. ಅವರ ಜೊತೆಗೆ ಸಾಮಾನ್ಯರಂತೇ ಇವರನ್ನೂ ಇರಿಸಲಾಗಿದೆ. ಮೊದಲ ದಿನ ಸಾಮಾನ್ಯ ಊಟ ಮಾಡಿದ್ದ ಪವಿತ್ರಾ ನಿದ್ರೆಯಿಲ್ಲದೇ ಕಳೆದಿದ್ದರು. ಎರಡನೇ ದಿನ ಅವರಿಗೆ ಇಷ್ಟದ ಮಾಂಸದೂಟವನ್ನೇ ನೀಡಲಾಗಿದೆ. ಹಾಗಿದ್ದರೂ ಯಾಕೋ ನೆಮ್ಮದಿಯಿಲ್ಲದೇ ನಿದ್ರೆ ಮಾಡದೇ ಕಾಲ ಕಳೆದಿದ್ದಾರಂತೆ.
ಕಾನೂನು ಕೈಗೆ ತೆಗೆದುಕೊಳ್ಳಲು ಹೋಗಿ ಈಗ ಪಶ್ಚಾತ್ತಾಪ ಪಡುವಂತಾಗಿದೆ. ಇದುವರೆಗೆ ಐಷಾರಾಮಿ ಜೀವನ ನಡೆಸುತ್ತಿದ್ದ ಪವಿತ್ರಾಗೆ ಈಗ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಇಂದು ದರ್ಶನ್ ಸೇರಿದಂತೆ ಉಳಿದ ಆರೋಪಿಗಳೂ ಕೋರ್ಟ್ ಗೆ ಹಾಜರಾಗಲಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.