ಬೆಂಗಳೂರು: ಒಬ್ಬರು ಲೇಡಿ ಡಾನ್ ಮತ್ತು ಇಬ್ಬರು ಹೀರೋಗಳು ಸೇರಿಸಿಕೊಂಡು ಬೇಕೆಂದೇ ನನ್ನ ಸಿನಿಮಾ ಬಿಡುಗಡೆ ಹಿಂದಿನ ದಿನ ಕೇಸ್ ಹಾಕಿ ಸಿಕ್ಕಿ ಹಾಕಿಸಿದ್ದಾರೆ ಎಂದು ಅರೆಸ್ಟ್ ಆಗುವ ಮುನ್ನ ಮಡೆನೂರು ಮನು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಸಹ ನಟಿಯ ಮೇಲೆ ರೇಪ್ ಮಾಡಿದ ಆರೋಪದಲ್ಲಿ ಮಡೆನೂರು ಮನು ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದೀಗ ಮನುವನ್ನು ಅರೆಸ್ಟ್ ಕೂಡಾ ಮಾಡಲಾಗಿದೆ.
ನಾಳೆ ಮನು ನಾಯಕರಾಗಿರುವ ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ತಮ್ಮ ಸಿನಿಮಾ ಬಿಡುಗಡೆ ಹಿಂದಿನ ದಿನವೇ ಮನು ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ಅತ್ಯಾಚಾರ ಮಾಡಿ ವಂಚನೆ ಮಾಡಿದ್ದಾರೆಂದು ಪ್ರಕರಣ ದಾಖಲಾದ ಬೆನ್ನಲ್ಲೇ ಮನು ವಿಡಿಯೋ ಸಂದೇಶ ಕಳುಹಿಸಿದ್ದು, ನನ್ನ ಸಮಸ್ಯೆ ಏನೇ ಇರಲಿ, ನಾಳೆ ನಮ್ಮ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.
ನಿಮಗೆಲ್ಲಾ ವಿಚಾರ ಗೊತ್ತಿರಬಹುದು. ಇದು ಉದ್ದೇಶಪೂರ್ವಕವಾಗಿ ಎಂದು ನಾನು ಹೇಳಬೇಕಾಗಿಲ್ಲ, ನಿಮಗೇ ಗೊತ್ತಾಗುತ್ತದೆ. ನಾವು ಕಷ್ಟಪಟ್ಟು ಮಾಡಿದ ಸಿನಿಮಾ ನಾಳೆ ರಿಲೀಸ್ ಆಗುವಾಗ ಎಫ್ಐಆರ್ ಹಾಕುವ ಅಗತ್ಯವಿರಲಿಲ್ಲ. ಯಾಕೆಂದರೆ ಇತ್ತೀಚೆಗಿನ ದಿನಗಳಲ್ಲಿ ನಾನು ಮಾತನಾಡಿದ್ದೇನೆ, ಏನು, ಹೆಂಗೆ ಎಂದು ಕೇಳಿದಾಗ ಕೆಲವು ಕ್ಲಾರಿಟಿನೂ ಕೊಟ್ಟಿದ್ದಾಳೆ. ಹಿಂಗಿಂಗೆ ನಾನು ಸುಮ್ಮನಿದ್ದರೂ ಬೇರೆಯವರು ಬಿಡ್ತಿಲ್ಲ ಎಂದಿದ್ದಾಳೆ. ಅವರು ಯಾರು ಹೇಳಿಕೊಡ್ತಿದ್ದಾರೆ ಎಂದೂ ನನ್ನಲ್ಲಿ ಬಾಯ್ಬಿಟ್ಟಿದ್ದಾಳೆ. ಇಬ್ಬರು ಹೀರೋಗಳು, ಒಬ್ಬ ಲೇಡಿ ಡಾನ್, ಟೋಟಲ್ ಮೂರು ಜನ. ಅವರು ಯಾರು ಎಂತಲೂ ನಾನು ರಿವೀಲ್ ಮಾಡ್ತೀನಿ. ಪ್ರತಿಯೊಂದಕ್ಕೂ ಸಾಕ್ಷಿ ಕೊಡ್ತೀನಿ. ನಾನು ಯಾರಿಗೆ ಏನು ಮಾಡಿದ್ದೀನಿ ಗೊತ್ತಿಲ್ಲ? ನನ್ನ ಸಾವನ್ನೂ ಬಯಸಿದ್ದಾರಂತೆ. ಅವನು ಸಾಯೋ ಬದಲು ಕಾಮಿಡಿ ಕಿಲಾಡಿಯ ಇವನು ಸಾಯಬಾರದಿತ್ತಾ ಎಂದು ತಮಾಷೆ ಮಾಡಿದ್ದರಂತೆ. ನಾನು ನಂದಾಯ್ತು ನನ್ನ ಕೆಲಸ ಆಯ್ತು ಎಂದು ಇದ್ದವನು. ಈಗ ನನಗೆ ಒಂದೇ ಓಡ್ತಿರೋದು ತಲೆಯಲ್ಲಿ. ಒಂದು, ಒಂದೂವರೆ ತಿಂಗಳಿನಿಂದ ನಮ್ಮ ಸಿನಿಮಾ ನೋಡಿ ಎಂದು ಓಡಾಡಿದ್ದೀನಿ. ಪ್ರತಿಯೊಬ್ಬರ ಮನೆಗೆ ಹೋಗಿ ಇನ್ವಿಟೇಷನ್ ಕೊಟ್ಟು ಬಂದಿದ್ದೀನಿ. ಸಿನಿಮಾಗೆ ಮೋಸ ಆಗಬಾರದು. ನಿರ್ಮಾಪಕರು ಎಲ್ಲೋ ಹೋಗಿ ಹಣ ತಂದಿರ್ತಾರೆ. ನನ್ನ ನಂಬಿ ದುಡ್ಡು ಹಾಕಿದ ನಿರ್ಮಾಪಕರು, ಟೀಂಗೆ ತೊಂದರೆಯಾಗಬಾರದು. ನನ್ನ ಮೇಲೆ ಬಂದಿರುವ ಈ ಆರೋಪಕ್ಕೆ ಎಲ್ಲದಕ್ಕೂ ಸಾಕ್ಷಿ ಸಮೇತ ನಿಮಗೆ ಕ್ಲಾರಿಟಿ ಕೊಡ್ತೀನಿ ಎಂದು ಮನು ಹೇಳಿದ್ದಾರೆ.