Publish Date: Wed, 28 May 2025 (20:27 IST)
Updated Date: Wed, 28 May 2025 (20:33 IST)
ಬೆಂಗಳೂರು: ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂದು ಹೇಳುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ನಟ ಕಮಲ್ ಹಾಸನ್ ಅವರು ಮತ್ತೇ ಉದ್ಧಟತನ ಮೆರೆದಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿದ್ದ ಕಮಲ್ ಹಾಸನ್ ವಿರುದ್ಧ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ನಟ ಮತ್ತೆ ಮೊಂಡಾಟವಾಡಿದ್ದಾರೆ. ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದಿದ್ದಾರೆ.
ಕೇರಳದಲ್ಲಿ ಥಗ್ ಲೈಫ್ ಸಿನಿಮಾದ ಪ್ರಚಾರದ ವೇಳೆ ಮಾತನಾಡಿದ ಅವರು ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳಿಗೆ ಅರ್ಹತೆ ಇಲ್ಲ. ಅನೇಕ ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ತಮಿಳುನಾಡು ಒಂದು ವಿಶಾಲ ಹೃದಯ ರಾಜ್ಯ. ಮಲಯಾಳಲಂನ ಮೆನನ್, ತೆಲುಗಿನ ರೆಡ್ಡಿ, ಕನ್ನಡದ ಐಯ್ಯಂಗಾರ್ ತಮಿಳುನಾಡು ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ.
ಭಾಷೆ ಬಗ್ಗೆ ಆಳವಾದ ಚರ್ಚೆಗಳು ನಡೆಯಲಿ. ಇದನ್ನು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಭಾಷಾ ತಜ್ಞರಿಗೆ ಬಿಡೋಣ ಎಂದು ಸ್ಪಷ್ಟನೆ ನೀಡಿದರು.
ನಾನು ಪ್ರೀತಿಯಿಂದಲೇ ಹೇಳಿದ್ದು, ನಾನು ಸಮಸ್ಯೆಗೆ ಸಿಲುಕಿದಾಗ ನನಗೆ ಬೆಂಬಲವಾಗಿ ಕನ್ನಡಿಗರು ನಿಂತಿದ್ರು. ಚೆನ್ನೈನಲ್ಲಿ ನಾನು ಸಮಸ್ಯೆ ಎದುರಿಸಿದಾಗ ನನಗೆ ಕನ್ನಡಿಗರು ಬೆಂಬಲ ಸೂಚಿಸಿದ್ದರು.