Publish Date: Mon, 01 Dec 2025 (10:51 IST)
Updated Date: Mon, 01 Dec 2025 (10:56 IST)
ಬೆಂಗಳೂರು: ಗೋವಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ರಿಷಬ್ ಶೆಟ್ಟಿ ಎದುರುಗಡೆಯೇ ಬಾಲಿವುಡ್ ನಟ ರಣವೀರ್ ಸಿಂಗ್ ದೈವಕ್ಕೆ ಅಪಹಾಸ್ಯ ಮಾಡಿದ್ದಾರೆ ಎಂದು ವಿವಾದವಾಗಿದೆ. ಅಸಲಿಗೆ ರಿಷಬ್ ಸುಮ್ಮನೆ ಕೂತಿದ್ದು ನಿಜವಾ? ಇಲ್ಲಿದೆ ಅಸಲಿ ವಿಡಿಯೋ.
ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ದೈವದ ಬಗ್ಗೆ ಬಾಯಿಗೆ ಬಂದಂತೆ ನಡೆದುಕೊಂಡು ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲೂ ದೈವಾರಾಧಕರು ರಣವೀರ್ ಅಪಹಾಸ್ಯ ಮತ್ತು ರಿಷಬ್ ಶೆಟ್ಟಿ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಾಮುಂಡಿ ದೈವವನ್ನು ದೆವ್ವ ಎಂದಿದ್ದಲ್ಲದೆ ರಿಷಬ್ ಶೆಟ್ಟಿ ಕ್ಲೈಮ್ಯಾಕ್ಸ್ ನಲ್ಲಿ ಮಾಡಿದಂತೆ ಮುಖಭಾವವನ್ನು ಮಾಡಲು ಹೋಗಿ ರಣವೀರ್ ಸಿಂಗ್ ವಿವಾದ ಮಾಡಿಕೊಂಡಿದ್ದಾರೆ. ಈ ವೇಳೆ ರಣವೀರ್ ಇಷ್ಟೆಲ್ಲಾ ಮಾಡುವಾಗಲೂ ರಿಷಬ್ ನಗುತ್ತಾ ಸುಮ್ಮನೇ ಕೂತಿರುವಂತೆ ವಿಡಿಯೋದಲ್ಲಿ ಕಂಡುಬರುತ್ತಿದೆ.
ಆದರೆ ಅಸಲಿಗೆ ಇಲ್ಲಿ ನಡೆದಿದ್ದೇ ಬೇರೆ. ಮುಂದಿನ ಸಾಲಿನಲ್ಲೇ ಕೂತಿದ್ದ ರಿಷಬ್ ಕಡೆ ಓಡೋಡಿ ಬರುವ ರಣವೀರ್ ಸಿಂಗ್ ತಬ್ಬಿಕೊಳ್ಳುತ್ತಾರೆ. ಬಳಿಕ ರಿಷಬ್ ಮುಂದೆ ರಿಷಬ್ ಕ್ಲೈಮ್ಯಾಕ್ಸ್ ನಲ್ಲಿ ಮಾಡಿದ್ದಂತೆ ಕಣ್ಣು ತಿರುಗಿಸಿ ಅನುಕರಿಸುತ್ತಾರೆ. ತಕ್ಷಣವೇ ರಿಷಬ್ ನೋ ನೋ ಎಂದು ಕೈ ಸನ್ನೆ ಮಾಡುತ್ತಾರೆ.
ಬಳಿಕ ವೇದಿಕೆಗೆ ಹೋಗಿ ಮತ್ತೆ ಅದನ್ನೇ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕ್ಲಿಪ್ ನಲ್ಲಿ ತೋರಿಸುವಂತೆ ರಿಷಬ್ ಸುಮ್ಮನೇ ನಗುತ್ತಾ ಕೂತಿರಲಿಲ್ಲ. ಆದರೆ ಇದನ್ನು ಎಡಿಟ್ ಮಾಡಿ ಈ ರೀತಿ ತೋರಿಸಲಾಗಿದೆ. ಇದರಿಂದ ರಿಷಬ್ ಗೂ ವಿವಾದ ಮೆತ್ತಿಕೊಂಡಿದೆ.