Publish Date: Fri, 19 Jan 2024 (08:22 IST)
Updated Date: Fri, 19 Jan 2024 (08:52 IST)
ಬೆಂಗಳೂರು: ನಟ ದರ್ಶನ್ ಹುಟ್ಟಹಬ್ಬಕ್ಕೆ ಇನ್ನು ಒಂದು ತಿಂಗಳಿರುವಾಗಲೇ ಅಭಿಮಾನಿಗಳಿಗೆ ಖಡಕ್ ಸೂಚನೆಯೊಂದನ್ನು ಕೊಟ್ಟಿದ್ದಾರೆ.
ಫೆಬ್ರವರಿ 16 ಕ್ಕೆ ದರ್ಶನ್ ಹುಟ್ಟುಹಬ್ಬವಿದೆ. ಹೀಗಾಗಿ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಮುಂದೆ ಬ್ಯಾನರ್ ಹಾಕಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್, ಫ್ಲೆಕ್ಸ್ ಹಾಕಲೇಬೇಡಿ ಎಂದಿದ್ದಾರೆ.
ನನ್ನ ಹುಟ್ಟುಹಬ್ಬಕ್ಕೆ ಬ್ಯಾನರ್, ಫ್ಲೆಕ್ಸ್ ಹಾಕಲೇಬೇಡಿ. ಹಾರ, ತುರಾಯಿಗಾಗಿ ಖರ್ಚು ಮಾಡುವ ಬದಲು ಪ್ರತೀ ವರ್ಷದಂತೇ ಆ ಹಣದಲ್ಲಿ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ಮಾಡಿ. ಅದನ್ನು ಒಗ್ಗೂಡಿಸಿ ಅನಾಥಾಶ್ರಮಕ್ಕೆ ಸೇರಿಸುವ ಜವಾಬ್ಧಾರಿ ನನ್ನದು. ಸಂಭ್ರಮಾಚರಣೆ ಮಾಡುವ ನೆಪದಲ್ಲಿ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಮಾಡುವುದು, ಪಟಾಕಿ ಹೊಡೆದು ತೊಂದರೆ ಕೊಡುವುದು, ಅವರ ಹೂಕುಂಡಗಳಿಗೆ ಹಾನಿ ಮಾಡಿ ಅನುಚಿತ ವರ್ತನೆ ತೋರಬೇಡಿ. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಇರುವ ನೀವು ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ ಎಂದು ದರ್ಶನ್ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಬ್ಯಾನರ್ ಕಟ್ಟಲು ಹೋಗಿ ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ದರ್ಶನ್ ಮೊದಲೇ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.