Publish Date: Wed, 10 Jan 2024 (09:30 IST)
Updated Date: Wed, 10 Jan 2024 (09:43 IST)
ಬೆಂಗಳೂರು: ಕಾಟೇರ ಸಿನಿಮಾದ ಪ್ರದರ್ಶನಕ್ಕಾಗಿ ದುಬೈಗೆ ತೆರಳಿರುವ ನಟ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಫೋಟೋ ಮತ್ತು ಅದರ ಜೊತೆಗೆ ಅವರು ಬರೆದಿದ್ದ ಸಂದೇಶ ಎಲ್ಲರ ಗಮನ ಸೆಳೆದಿದೆ.
ದುಬೈನಲ್ಲಿ ಅಲ್ಲಿನ ಕನ್ನಡಿಗ ಸ್ನೇಹಿತರ ಜೊತೆ ದರ್ಶನ್ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ಅವರ ವಿರುದ್ಧ ಪಬ್ ನಲ್ಲಿ ರಾತ್ರಿಯಿಡೀ ಪಾರ್ಟಿ ಮಾಡಿದ್ದಕ್ಕೆ ಕೇಸ್ ದಾಖಲಾಗಿದೆ. ದರ್ಶನ್ ಸೇರಿದಂತೆ ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ನೀನಾಸಂ ಸತೀಶ್, ರಾಕ್ ಲೈನ್ ವೆಂಕಟೇಶ್, ಡಾಲಿ ದನಂಜಯ್ ಸೇರಿದಂತೆ 8 ಮಂದಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.
ಆದರೆ ದರ್ಶನ್ ಸದ್ಯಕ್ಕೆ ದುಬೈನಲ್ಲಿರುವ ಕಾರಣ ವಿಚಾರಣೆಗೆ ಹಾಜರಾಗಲಾಗುತ್ತಿಲ್ಲ. ಆದರೆ ಈ ಬೆಳವಣಿಗೆ ಅವರ ಕಿವಿಗೂ ಬಿದ್ದಿದೆ. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಅವರು ಖಡಕ್ ಸಂದೇಶವೊಂದನ್ನು ಬರೆದಿದ್ದಾರೆ.
ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಅಭಾರಿಯಾಗಿದ್ದೇನೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡಿಕೊಳ್ಳಲ್ಲ, ಬೇಜಾರು ಮಾಡ್ಕೊಳ್ಳಲ್ಲ, ನೊಂದುಕೊಳ್ಳಲ್ಲ, ಕಾಲಾಯ ತಸ್ಮೈ ನಮಃ ಎಂದಿದ್ದಾರೆ.