Publish Date: Sat, 07 Sep 2024 (09:35 IST)
Updated Date: Sat, 07 Sep 2024 (09:38 IST)
ಬೆಂಗಳೂರು: ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಸೋಮವಾರ ಅವರು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೊನ್ನೆಯಷ್ಟೇ ನಟ ದರ್ಶನ್ ಆಂಡ್ ಗ್ಯಾಂಗ್ ವಿರುದ್ಧ ಪೊಲೀಸರು 3991 ಪುಟಗಳ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಚಾರ್ಜ್ ಶೀಟ್ ನಲ್ಲಿಯೂ ದರ್ಶನ್ ಎ2, ಪವಿತ್ರಾ ಗೌಡ ಎ1 ಆರೋಪಿಯಾಗಿ ಮುಂದುವರಿದಿದ್ದಾರೆ. ಉಳಿದಂತೆ ಎಲ್ಲಾ ಆರೋಪಿಗಳ ಆರೋಪಿ ಸಂಖ್ಯೆಯಲ್ಲೂ ಯಾವುದೇ ಬದಲಾವಣೆಯಾಗಿಲ್ಲ.
ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಬಳ್ಳಾರಿ ಜೈಲಿಗೆ ಬಂದಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜಾಮೀನು ಅರ್ಜಿಗೆ ಸಹಿ ಹಾಕಿಸಿಕೊಂಡು ಹೋಗಿದ್ದರು. ಇದಾದ ಬಳಿಕ ಕೋರ್ಟ್ ಗೆ ರಜೆಯಿರುವುದರಿಂದ ಅವರಿಗೆ ಜಾಮೀನಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದರ ನಡುವೆ ನಿನ್ನೆ ಮಂತ್ರಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಇದೀಗ ನಾಳೆ ಅವರು ತಮ್ಮ ವಕೀಲರ ಮೂಲಕ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯಕ್ಕೆ ಅವರು ಕೆಳಹಂತದ ನ್ಯಾಯಾಲಯದಲ್ಲೇ ಜಾಮೀನಿಗ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ ಅವರ ಮೇಲಿನ ಆರೋಪ ಪಟ್ಟಿಗಳನ್ನು ನೋಡುತ್ತಿದ್ದರೆ ಸದ್ಯಕ್ಕೆ ಅವರಿಗೆ ಜಾಮೀನು ಸಿಗುವುದು ಸುಲಭವಲ್ಲ ಎನಿಸುತ್ತಿದೆ.