Publish Date: Thu, 02 May 2019 (17:44 IST)
Updated Date: Thu, 02 May 2019 (17:56 IST)
ಎಸ್.ಎಲ್.ಎನ್. ಕ್ರಿಯೇಶನ್ಸ್ ಲಾಂಛನದಲ್ಲಿ ನಾಗೇಶ್ ಕೋಗಿಲು ನಿರ್ಮಿಸುತ್ತಿರುವ ಎರಡನೇ ಸಿನಿಮಾ ಟಕ್ಕರ್. ದರ್ಶನ್ ಅವರ ಕುಟುಂಬದ ಹುಡುಗ ಮನೋಜ್ ಈ ಸಿನಿಮಾದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡುತ್ತಿರುವ ವಿಚಾರ ಈಗಾಗಲೇ ಜಾಹೀರಾಗಿದೆ.
ಇತ್ತೀಚಿಗಷ್ಟೇ ಟಕ್ಕರ್ ಚಿತ್ರದ ಮೊದಲ ಟೀಸರ್ಅನ್ನು ದಿನಕರ್ ತೂಗುದೀಪ ಲೋಕಾರ್ಪಣೆಗೊಳಿಸಿದ್ದರು. ಈಗ ದರ್ಶನ್ ಅವರು ಟಕ್ಕರ್ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಅಲ್ಲದೇ ಈ ಚಿತ್ರವನ್ನು ಯಾವ ರೀತಿ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾಗಿ ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿದ್ದಾರೆ.
ಮೊದಲ ಟೀಸರ್ ತುಂಬಾ ಚೆನ್ನಾಗಿ ಬಂದಿದೆ ಎಂದಿದ್ದು ಮಾತ್ರವಲ್ಲದೆ, ಧ್ವನಿಮುದ್ರಣಗೊಂಡಿರುವ ಟೈಟಲ್ ಸಾಂಗ್ಅನ್ನು ಕೇಳಿ ಅದರ ಬಗ್ಗೆ ಕೂಡಾ ದರ್ಶನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ಚಿತ್ರದ ನಿರ್ದೇಶಕ ವಿ ರಘು ಶಾಸ್ತ್ರಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಟಕ್ಕರ್ ಚಿತ್ರದ ನಾಯಕನಟ ಮನೋಜ್ ಅವರಿಗೆ ``ನಿನ್ನನ್ನು ನಂಬಿ ನಿರ್ಮಾಪಕರು ಹಣ ಹೂಡಿದ್ದಾರೆ. ಪ್ರತೀ ಹಂತದಲ್ಲೂ ಅವರ ಜೊತೆಗಿರಬೇಕು. ನಿರ್ಮಾಪಕರ ಹಿತ ಕಾಯಬೇಕಿರುವುದು ಪ್ರತಿಯೊಬ್ಬ ಕಲಾವಿದನ ಕರ್ತವ್ಯ. ನಾಗೇಶ್ ಕೋಗಿಲು ಮತ್ತು ನಿನ್ನ ಸ್ನೇಹ ಬಾಂಧವ್ಯ ಈ ಒಂದು ಸಿನಿಮಾಗೆ ಕೊನೆಯಾಗಬಾರದು. ಟಕ್ಕರ್ ಸಿನಿಮಾ ತೆರೆಗೆ ಬಂದಮೇಲೂ ಇನ್ನೂ ಸಾಕಷ್ಟು ಸಿನಿಮಾಗಳು ನೀವು ಒಟ್ಟಿಗೇ ಕೆಲಸ ಮಾಡುವಂತಾಗಲಿ’’ ಎಂದು ಹಾರೈಸಿದ್ದಾರೆ.