Publish Date: Wed, 30 Oct 2024 (10:47 IST)
Updated Date: Wed, 30 Oct 2024 (10:49 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರಾಗಿದ್ದು, ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ.
ಅನಾರೋಗ್ಯದ ನೆಪದಲ್ಲಿ ದರ್ಶನ್ ಪರ ವಕೀಲ ಸಿವಿ ನಾಗೇಶ್ ಮಧ್ಯಂತರ ಜಾಮೀನು ನೀಡುವಂತೆ ಹೈಕೋರ್ಟ್ ಮುಂದೆ ವಾದ ಮಂಡಿಸಿದ್ದರು. ಅದರಂತೆ ಅವರ ಚಿಕಿತ್ಸೆಗಾಗಿ ಕೋರ್ಟ್ ಈಗ 6 ವಾರಗಳ ಮಧ್ಯಂತರ ಜಾಮೀನು ನೀಡಿದೆ. ಇದು ಆರೋಗ್ಯದ ವಿಚಾರವಾಗಿ ನೀಡಿದ ಜಾಮೀನು.
ಮೈಸೂರಿನಲ್ಲಿ ದರ್ಶನ್ ಶಸ್ತ್ರಚಿಕಿತ್ಸೆಗೊಳಗಾಗಬೇಕಿದೆ. ಈಗ ಅವರ ಬೆನ್ನು ನೋವಿನ ಸಮಸ್ಯೆ ತೀವ್ರವಾಗಿದೆ. ಅದನ್ನು ಹಾಗೆಯೇ ಬಿಟ್ಟರೆ ಪಾರ್ಶ್ವ ವಾಯುಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಅವರ ಪರ ವಕೀಲರು ಸಿವಿ ನಾಗೇಶ್ ಕೋರ್ಟ್ ಗೆ ಮನವರಿಕೆ ಮಾಡಿದೆ. ಆದರೆ ಇದರ ಜೊತೆಗೆ ಕೆಲವು ಷರತ್ತು ವಿಧಿಸಿದೆ.
ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ ಎಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಕೋರ್ಟ್ ಗೆ ನೀಡಬೇಕು. ಒಂದು ವಾರದೊಳಗಾಗಿ ಈ ಎಲ್ಲಾ ವಿವರಗಳನ್ನು ಕೋರ್ಟ್ ಗೆ ಸಲ್ಲಿಸಲು ಸೂಚಿಸಲಾಗಿದೆ. ಈ ಆರು ವಾರಗಳ ಅವಧಿಯನ್ನು ಕೇವಲ ಚಿಕಿತ್ಸೆಗೆ ಮಾತ್ರ ಸಮಯ ಬಳಸಬಹುದಾಗಿದೆ. ಪಾಸ್ ಪೋರ್ಟ್ ಸರೆಂಡರ್ ಮಾಡಬೇಕಾಗುತ್ತದೆ. ಹೀಗಾಗಿ ವಿದೇಶಕ್ಕೆ ತೆರಳುವಂತಿಲ್ಲ. ಕರ್ನಾಟಕದಲ್ಲೇ ಚಿಕಿತ್ಸೆ ಪಡೆಯಬೇಕಾಗುತ್ತದೆ. ಎಸ್ ಪಿಪಿ ಮನವಿ ಹಿನ್ನಲೆಯಲ್ಲಿ ಪಾಸ್ ಪೋರ್ಟ್ ಸರೆಂಡರ್ ಮಾಡಲು ಆದೇಶ ಮಾಡಲಾಗಿದೆ.