Publish Date: Sun, 14 Jul 2024 (11:44 IST)
Updated Date: Sun, 14 Jul 2024 (11:48 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜೈಲಿನಲ್ಲಿ ದೇಹ ದಂಡಿಸಲು ಹೊಸ ಉಪಾಯ ಕಂಡುಕೊಂಡಿದ್ದಾರೆ.
ಇತ್ತೀಚೆಗಷ್ಟೇ ನಟ ದರ್ಶನ್ ನನಗೆ ಜೈಲೂಟ ಸೇರುತ್ತಿಲ್ಲ, ಅಜೀರ್ಣವಾಗುತ್ತಿದೆ. ಮನೆ ಆಹಾರ ಸೇವನೆಗೆ ಅವಕಾಶ ಕೊಡಿ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ಎರಡು ವಾರಗಳಿಂದ ದರ್ಶನ್ 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ರೀತಿ ದೇಹ ತೂಕ ಕಳೆದುಕೊಳ್ಳುತ್ತಿರುವುದು ಅವರ ಚಿಂತೆಗೆ ಕಾರಣವಾಗಿದೆ.
ದರ್ಶನ್ ಪ್ರತಿನಿತ್ಯ ಜಿಮ್ ಮಾತ್ರ ತಪ್ಪಿಸುತ್ತಿರಲಿಲ್ಲ. ವರ್ಕೌಟ್ ಮಾಡಿ ತಮ್ಮ ದೇಹ ಕಟ್ಟಮಸ್ತಾಗಿಟ್ಟುಕೊಂಡಿದ್ದರು. ಆದರೆ ಇದೀಗ ಜೈಲಿನಲ್ಲಿ ವರ್ಕೌಟ್ ಮಾಡಲಾಗುತ್ತಿಲ್ಲ, ಒಳ್ಳೆಯ ಆಹಾರ ಸಿಗುತ್ತಿಲ್ಲ. ಇದರಿಂದ ದರ್ಶನ್ ಸೊರಗಿ ಹೋಗಿದ್ದಾರೆ. ಆದರೆ ಹೀಗೆಯೇ ಬಿಟ್ಟರೆ ತಮ್ಮ ದೇಹ ತೂಕ ಯಾವ ಮಟ್ಟಕ್ಕೆ ತಲುಪುತ್ತದೋ ಎಂಬ ಚಿಂತೆ ಶುರುವಾಗಿದೆ.
ಈ ಕಾರಣಕ್ಕೆ ದರ್ಶನ್ ಈಗ ಪ್ರತಿನಿತ್ಯ ಯೋಗ ಮಾಡುತ್ತಿದ್ದಾರಂತೆ. ಮಾನಸಿಕವಾಗಿ ಕುಗ್ಗಿ ಹೋಗಿರುವ ಅವರು ಈಗ ಯೋಗದ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಶಕ್ತಿ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರಂತೆ. ಇದರ ಜೊತೆಗೆ ಜೈಲಿನಲ್ಲಿರುವ ಗ್ರಂಥಾಲಯದಿಂದ ಪುಸ್ತಕ ಪಡೆದುಕೊಂಡು ಓದುತ್ತಾ ಸಮಯ ಕಳೆಯುತ್ತಿದ್ದಾರೆ. ಅದರ ಹೊರತಾಗಿ ಇತರೆ ಖೈದಿಗಳ ಜೊತೆ ಹೆಚ್ಚು ಮಾತನಾಡದೇ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.