Publish Date: Mon, 18 Oct 2021 (17:05 IST)
Updated Date: Mon, 18 Oct 2021 (22:07 IST)
ಜೆರುಸಲೇಂ : ಭಾರತ ಮತ್ತು ಇಸ್ರೇಲ್ ನಡುವಿನ ಮುಕ್ತ ವಾಣಿಜ್ಯ ಒಪ್ಪಂದದ (ಎಫ್ ಟಿಎ)ಮಾತುಕತೆಯನ್ನು ಪುನರಾರಂಭಿಸಲು ಎರಡೂ ರಾಷ್ಟ್ರಗಳು ಒಪ್ಪಿವೆ. ಸದ್ಯಕ್ಕೆ ಇಸ್ರೇಲ್ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಷಯ ತಿಳಿಸಿದ್ದಾರೆ.
ಸೋಮವಾರ ಜೈಶಂಕರ್, ಇಸ್ರೇಲ್ನ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರೂ ಆಗಿರುವ ಯೈರ್ ಲಪಿಡ್ ಅವರನ್ನು ಭೇಟಿ ಮಾಡಿದರು. ಭೇಟಿಯ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ ಟಿಎ ಮಾತುಕತೆಯನ್ನು ಮರುಚಾಲನೆ ಗೊಳಿಸಲಾಗುತ್ತದೆ. ದೀರ್ಘಕಾಲದಿಂದ ನಡೆಯುತ್ತಿರುವ ಈ ಒಪ್ಪಂದ ಆಧಾರಿತ ಚರ್ಚೆಗಳು ಮುಂದಿನ ಜೂನ್ ಹೊತ್ತಿಗೆ ನಿರ್ಣಾಯಕ ಹಂತಕ್ಕೆ ಬರಬಹುದು ಎಂದು ಆಶಿಸಿದ್ದಾರೆ.
ಇದೇ ವೇಳೆ, ಕೋವಿಡ್ ಭೀತಿ ನಿವಾರಣೆಯಾಗುತ್ತಿರುವ ಹಿನ್ನೆಲೆಯಲ್ಲಿ, ಎರಡೂ ದೇಶಗಳ ಪ್ರಜೆಗಳ ಭಾರತ ಮತ್ತು ಇಸ್ರೇಲ್ ನಡುವೆ ಸುಲಲಿತ ಪ್ರಯಾಣಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.