Publish Date: Wed, 17 Jun 2020 (09:59 IST)
Updated Date: Wed, 17 Jun 2020 (10:00 IST)
ನವದೆಹಲಿ: ಕಳೆದ ಮೇ ತಿಂಗಳಿನಿಂದ ಗಡಿಯಲ್ಲಿ ಚೀನಾ ಆಟಾಟೋಪ ಹೆಚ್ಚಾಗಿದೆ. ಸುಖಾ ಸುಮ್ಮನೇ ತಗಾದೆ ತೆಗೆಯುತ್ತಿದ್ದು ಮಾತುಕತೆ ಹಂತಕ್ಕೆ ತಲುಪಿತ್ತು. ಆದರೆ ನಿನ್ನೆಯಂತೂ ಪರಿಸ್ಥಿತಿ ಕೈ ಮೀರಿತ್ತು.
ಅಷ್ಟಕ್ಕೂ ಚೀನಾ ಯಾಕೆ ಗಡಿಯಲ್ಲಿ ಭಾರತದ ವಿರುದ್ಧ ಇದ್ದಕ್ಕಿದ್ದಂತೆ ಕಿರಿಕ್ ತೆಗೆದಿದೆ ಗೊತ್ತೇ? ಇತ್ತೀಚೆಗಿನ ದಿನಗಳಲ್ಲಿ ಚೀನಾ ಗಡಿಗೆ ತಾಗಿಕೊಂಡಂತಹ ಆಯಕಟ್ಟಿನ ಸ್ಥಳಗಳಲ್ಲಿ ಭಾರತ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿದೆ. ಇದರಿಂದ ಭಾರತಕ್ಕೆ ಚೀನಾ ಸೇನೆಯ ಚಲನವಲನಗಳ ಮೇಲೆ ಹದ್ದಿನಗಣ್ಣಿರಿಸಲು ಸುಲಭವಾಗಲಿದೆ.
ಇದುವೇ ಚೀನಾ ಸಂಕಟಕ್ಕೆ ಕಾರಣ. ಅದೇ ಕಾರಣಕ್ಕೆ ಭಾರತ ತನ್ನ ಗಡಿ ಮೀರಿ ರಸ್ತೆ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸುತ್ತಿದೆ. ಅಷ್ಟೇ ಅಲ್ಲದೆ, ನೇಪಾಳವನ್ನೂ ಭಾರತದ ವಿರುದ್ಧ ಎತ್ತಿಕಟ್ಟುವ ಕುಟಿಲ ಬುದ್ಧಿ ತೋರುತ್ತಿದೆ. ಆದರೆ ಚೀನಾ ಬೆದರಿಕೆಗೆ ಬಗ್ಗದ ಭಾರತ ಗಡಿನಿಯಂತ್ರಣ ರೇಖೆಯೊಳಗೆ ತನ್ನ ಕೆಲಸ ಮುಂದುವರಿಸಿದೆ. ಇದನ್ನು ಅರಗಿಸಿಕೊಳ್ಳಲು ಚೀನಾಕ್ಕೆ ಸಾಧ್ಯವಾಗುತ್ತಿಲ್ಲ.