ಇಸ್ಲಾಮಾಬಾದ್: ಭಾರತ ನಮ್ಮ ಮೇಲೆ ದಾಳಿ ನಡೆಸಿದ ಮೂರೇ ಗಂಟೆಯಲ್ಲಿ ಶರಣಾಗಿದೆ. ಗಡಿಯಲ್ಲಿ ಬಿಳಿ ಬಾವುಟ ಹಾರಿಸಿ ಶರಣಾಗಿದೆ ಎಂದು ಪಾಕಿಸ್ತಾನ ಸೇನೆ ಟ್ವೀಟ್ ಮಾಡಿ ಕೊಚ್ಚಿಕೊಂಡಿದೆ.
ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಪರಿಸ್ಥಿತಿ ಪಾಕಿಸ್ತಾನದ್ದಾಗಿದೆ. ತನ್ನ ನೆಲದಲ್ಲಿ ಆಶ್ರಯ ಕೊಟ್ಟು ಬೆಳೆಸಿಕೊಂಡಿದ್ದ ಉಗ್ರರನ್ನು ಭಾರತೀಯ ಸೇನೆ ಕ್ಷಣಾರ್ಧದಲ್ಲಿ ನಿರ್ನಾಮ ಮಾಡಿರುವುದನ್ನು ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ.
ನಿನ್ನೆ ತಡರಾತ್ರಿ ಆಪರೇಷನ್ ಸಿಂದೂರ ಹೆಸರಿನಲ್ಲಿ ಭಾರತೀಯ ಸೆನೆ 20 ನಿಮಿಷ ದಾಳಿ ನಡೆಸಿ 100 ಕ್ಕೂ ಹೆಚ್ಚು ಉಗ್ರರನ್ನು ಮಟ್ಟ ಹಾಕಿದೆ. 9 ಕಡೆ ದಾಳಿ ನಡೆಸಿದ್ದು ನಾಗರಿಕರಿಗೆ ಕೊಂಚವೂ ಹಾನಿಯಾಗದಂತೆ ನೋಡಿಕೊಂಡಿದೆ.
ಭಾರತೀಯ ಸೇನೆಯ ಈ ಕಾರ್ಯಾಚರಣೆಯನ್ನು ಒಪ್ಪಿಕೊಂಡಿರುವ ಪಾಕಿಸ್ತಾನ, ನೀವು ಶುರು ಮಾಡಿದ್ದೀರಿ ನಾವು ಕೊನೆಗೊಳಿಸುತ್ತೇವೆ ಎಂದು ಟ್ವೀಟ್ ಮಾಡಿತ್ತು. ಇದಾದ ಬಳಿಕ ಈಗ ಯಾವತ್ತಿನದ್ದೋ ಬಿಳಿ ಬಾವುಟದ ಫೋಟೋ ಪ್ರಕಟಿಸಿ, ಭಾರತೀಯ ಸೇನೆ ದಾಳಿ ನಡೆಸಿದ ಗಂಟೆಯೊಳಗೆ ನಮ್ಮ ಮುಂದೆ ಮಂಡಿಯೂರಿದೆ ಎಂದು ಕೊಚ್ಚಿಕೊಂಡಿದೆ.