ನವದೆಹಲಿ: ಆಪರೇಷನ್ ಸಿಂದೂರಕ್ಕೆ ಪ್ರತಿಯಾಗಿ ನಾವೂ ಪ್ರತ್ಯುತ್ತರ ಕೊಡಲಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹೇಳಿಕೆ ಬೆನ್ನಲ್ಲೇ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ದಾಳಿಗೆ ಬಂದರೆ ಬರಲಿ, ನಾವೂ ರೆಡಿ ಎಂದಿದೆ.
ಆಪರೇಷನ್ ಸಿಂದೂರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಪಾಕಿಸ್ತಾನ ಪ್ರಧಾನಿ ನಮಗೆ ಪ್ರತ್ಯುತ್ತರ ನೀಡುವ ಎಲ್ಲಾ ಹಕ್ಕಿದೆ. ಭಾರತ ದುಃಖಿಸುವಂತೆ ಮಾಡಲಿದ್ದೇವೆ ಎಂದು ರೋಷಾವೇಷದ ಹೇಳಿಕೆ ನೀಡಿದ್ದರು.
ಇದಕ್ಕೀಗ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ. ಪಾಕಿಸ್ತಾನ ಮಾಡುವ ಯಾವುದೇ ದಾಳಿಗೆ ನಾವು ರೆಡಿ. ಇಂದು ಭಾರತೀಯ ಸೇನೆ ಪತ್ರಿಕಾಗೋಷ್ಠಿ ನಡೆಸಿ ದಾಳಿಯ ಮಾಹಿತಿ ನೀಡಿದೆ. ಈ ವೇಳೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪಾಕಿಸ್ತಾನದ ಯಾವುದೇ ದಾಳಿ ಎದುರಿಸಲು ನಾವು ಸಿದ್ಧ ಎಂದು ಸಂದೇಶ ರವಾನಿಸಿದ್ದಾರೆ.
ಈಗಾಗಲೇ ಪಾಕಿಸ್ತಾನ ಭಾರತದ ಗಡಿ ರೇಖೆ ಬಳಿ ಗುಂಡಿನ ದಾಳಿ ಮುಂದುವರಿಸಿದೆ. ಇಂದು ಪಾಕಿಸ್ತಾನ ಕೂಡಾ ಭದ್ರತಾ ಪಡೆಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದು, ಭಾರತೀಯ ಸೇನೆ ಕೂಡಾ ಸನ್ನದ್ಧವಾಗಿದೆ.