ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಫ್ ಮುನೀರ್ ಭಾರತದ ಮೇಲೆ ಅಣ್ವಸ್ತ್ರ ದಾಳಿ ಬೆದರಿಕೆ ಹಾಕಿದ ಬೆನ್ನಲ್ಲೇ ಈಗ ಮಾಜಿ ಸಚಿವ ಬಿಲಾವಲ್ ಭುಟ್ಟೊ ಯುದ್ಧದ ಬೆದರಿಕೆ ಹಾಕಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಭಾರತ ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ಒಪ್ಪಂದ ಮುರಿದುಕೊಂಡು ಸೇಡು ತೀರಿಸಿಕೊಂಡಿದೆ. ಸಿಂಧೂ ನದಿ ನೀರು ಹಂಚಿಕೆ ಮಾಡದೇ ಇರುವುದರಿಂದ ಪಾಕಿಸ್ತಾನಕ್ಕೆ ಸಂಕಷ್ಟ ಎದುರಾಗಿದೆ. ಹೀಗಾಗಿ ಈಗ ದಿನಕ್ಕೊಬ್ಬರಂತೆ ಅಲ್ಲಿನ ನಾಯಕರು ಯುದ್ಧೋನ್ಮಾನದ ಮಾತುಗಳನ್ನಾಡುತ್ತಿದ್ದಾರೆ.
ಭಾರತ ಸಿಂಧೂ ನದಿ ಒಪ್ಪಂದ ಮರುಸ್ಥಾಪನೆ ಮಾಡದೇ ಇದ್ದರೆ ಅದು ಪಾಕಿಸ್ತಾನದ ಸಂಸ್ಕೃತಿ, ನಾಗರಿಕತೆ ಮೇಲೆ ಮಾಡಿದ ದಾಳಿಯೆಂದು ನಾವು ಪರಿಗಣಿಸುತ್ತೇವೆ. ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆಯಲ್ಲಿ ಹಿನ್ನಡೆ ಅನುಭವಿಸಿ ಭಾರತ ಈ ರೀತಿ ಹತಾಶಾ ಮನೋಭಾವ ಪ್ರದರ್ಶಿಸುತ್ತಿದೆ. ಇದನ್ನು ನಾನು ವಿದೇಶ ಭೇಟಿಗಳಲ್ಲಿ ಅಲ್ಲಿನ ರಾಷ್ಟ್ರಗಳಿಗೂ ಮನವರಿಕೆ ಮಾಡಿದ್ದೇನೆ.
ಯುದ್ಧವಾದರೆ ಪಾಕಿಸ್ತಾನದ ಜನರಿಗೆ ಮೋದಿಯನ್ನು ಎದುರಿಸುವ ತಾಕತ್ತಿದೆ. ಇದೇ ರೀತಿ ಮುಂದುವರಿದರೆ ಇನ್ನೊಂದು ಯುದ್ಧ ನಡೆದರೆ ಪಾಕಿಸ್ತಾನ ಎಲ್ಲಾ ಆರೂ ನದಿಗಳನ್ನು ವಶಪಡಿಸಿಕೊಳ್ಳಲಿದೆ ಎಂದು ಬಿಲಾವಲ್ ಭುಟ್ಟೊ ಕೊಚ್ಚಿಕೊಂಡಿದ್ದಾರೆ.