Publish Date: Sun, 18 Jul 2021 (14:54 IST)
Updated Date: Sun, 18 Jul 2021 (14:59 IST)
ಮಹಾರಾಷ್ಟ್ರ(ಜು.18): ಮುಂಬೈನಲ್ಲಿ ಮಳೆಯಬ್ಬರ ಕ್ಷಣ ಕ್ಷಣವೂ ಹೆಚ್ಚುತ್ತಿದ್ದು, ಜನ ಸಾಮಾನ್ಯರು ವರುಣನ ಅಬ್ಬರಕ್ಕೆ ಪರದಾಡುತ್ತಿದ್ದಾರೆ, ಈ ನಡುವೆ ಭೂಕುಸಿತದ ಎರಡು ಪ್ರಕರಣಗಳು ವರದಿಯಾಗಿದ್ದು, ಈ ಘಟನೆಯಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
* ಮುಂಬೈನಲ್ಲಿ ಅಬ್ಬರಿಸುತ್ತಿದೆ ಮಳೆ
* ಮಳೆಯಬ್ಬರಕ್ಕೆ ಇಪ್ಪತ್ತಕ್ಕೂ ಅಧಿಕ ಮಂದಿ ಸಾವು
* ಭಾರೀ ಮಳೆ, ಭೂಕುಸಿತ ಜನರಿಗೆ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ
ಹೌದು ಮುಂಬೈನ ವಿಕ್ರೋಲಿ ಹಾಗೂ ಚೇಂಬರ್ನಲ್ಲಿ ಮಳೆಯಬ್ಬರಕ್ಕೆ ಭೂಕುಸಿತ ಸಂಭವಿಸಿದ್ದು, ಅನೇಕ ಮನೆಗಳು ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದಿವೆ. ಎರಡು ವಿಭಿನ್ನ ಭೂಕುಸಿತ ಪ್ರಕರಣಗಳಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚು ಆತಂಕ ವ್ಯಕ್ತವಾಗಿದೆ.
ಕಳೆದ ರಾತ್ರಿಯಿಂದ ವಿಕ್ರೋಲಿ, ಚೇಂಬರ್ ಸೇರಿ ಮುಂಬೈನ ಬಹುತೇಕ ಎಲ್ಲಾ ಕಡೆ ಧಾರಾಕಾರ ಮಳೆ ಸುರಿಯುತ್ತಿದೆ. ಈ ನಡುವೆ ಭೂಕುಸಿತ ಕೂಡಾ ಸಂಭವಿಸಲಾರಂಭಿಸಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಶೀಘ್ರವಾಗಿ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳುವಂತೆಯೂ ಅಧಿಕಾರಿಗಳು ಜನರಿಇಗೆ ಸೂಚಿಸಿದ್ದಾರೆ.
ನೀರಿನಬ ರಭಸಕ್ಕೆ ಕಾರುಗಳು ಕೊಚ್ಚಿ ಹೋಗುತ್ತಿದ್ದು, ವರುಣನ ಅಬ್ಬರ ಇಉಳಿಯದಿದ್ದಲ್ಲಿ ಮತ್ತಷ್ಟು ಹಾನಿ ಸಂಭವಿಸುವ ಭೀತಿಯೂ ಎದುರಾಗಿದೆ.
ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ
ಇನ್ನು ಭೂಕುಸಿತದಲ್ಲಿ ಮೃತಪಟ್ಟವರ ಪರ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಘೋಷಿಸಿದ್ದಾರೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡವರಿಗೆ ಐವತ್ತು ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದ್ದಾರೆ.