Publish Date: Thu, 16 Jan 2020 (09:08 IST)
Updated Date: Thu, 16 Jan 2020 (09:10 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಪ್ರಯೋಗ ನಡೆಸಲು ಹೋಗಿ ಕೈ ಸುಟ್ಟುಕೊಂಡ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬುದ್ಧಿ ಕಲಿತುಕೊಂಡಿದ್ದಾರೆ.
ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಇಬ್ಬರಿಗೂ ಅವಕಾಶ ನೀಡಲು ತಾವು ನಾಲ್ಕನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದ ಕೊಹ್ಲಿಯ ಯೋಜನೆ ಈ ಪಂದ್ಯದಲ್ಲಿ ಕೈಗೂಡಲಿಲ್ಲ. ಇದಾದ ಬಳಿಕ ತಪ್ಪಿನ ಅರಿವಾಗಿ ಕೊಹ್ಲಿ ಈ ಪ್ಲ್ಯಾನ್ ಬಗ್ಗೆ ಮರುಪರಿಶೀಲನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಅತ್ತ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಶಿಖರ್ ಧವನ್ ತಮಗೆ ಆರಂಭಿಕ ಸ್ಥಾನವೇ ಬೇಕೆಂದಿಲ್ಲ. ಮೂರನೇ ಕ್ರಮಾಂಕವಾದರೂ ಸರಿಯೇ. ತಂಡ ನನ್ನಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೇಳುತ್ತದೋ ಅದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧ ಎಂದಿದ್ದಾರೆ. ಹೀಗಾಗಿ ಮುಂದಿನ ಪಂದ್ಯಕ್ಕೆ ಮತ್ತೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಧವನ್ ಮತ್ತು ರಾಹುಲ್ ಸ್ಥಾನ ಪಲ್ಲಟವಾಗಲಿದ್ದು, ಕೊಹ್ಲಿ ಯಥಾ ಪ್ರಕಾರ ಮೂರನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಗಿಳಿಯುವ ನಿರೀಕ್ಷೆಯಿದೆ.