Publish Date: Tue, 26 May 2020 (10:06 IST)
Updated Date: Tue, 26 May 2020 (10:07 IST)
ಮುಂಬೈ: ಆಫ್ರಿಕಾ, ಆಸ್ಟ್ರೇಲಿಯಾದಂತಹ ಕ್ರಿಕೆಟ್ ತಂಡಗಳು ಈಗ ಕ್ವಾರಂಟೈನ್ ಬಳಿಕ ಕ್ರಿಕೆಟ್ ಸರಣಿ ನಡೆಸುವ ಹೊಸ ಯೋಜನೆ ಹಮ್ಮಿಕೊಂಡಿದ್ದಾರೆ. ಆದರೆ ಇಂತಹ ಯೋಜನೆಗಳು ಟೀಂ ಇಂಡಿಯಾಗೆ ಪರಿಣಾಮಕಾರಿಯಾಗದು ಎಂದು ‘ವಾಲ್’ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಸರಣಿಗೆ ಮೊದಲು ಆಟಗಾರರಿಗೆ 14 ದಿನದ ಕ್ವಾರಂಟೈನ್, ಪರೀಕ್ಷೆ ನಡೆಸಿ ಬಳಿಕ ಪಂದ್ಯ ನಡೆಸುವ ಯೋಜನೆಯನ್ನು ಕೆಲವು ವಿದೇಶೀ ತಂಡಗಳು ಹಾಕಿಕೊಂಡಿವೆ. ಆದರೆ ಭಾರತ ತಂಡದಲ್ಲಿ ಇದು ಕೆಲಸ ಮಾಡದು. ಯಾಕೆಂದರೆ ಭಾರತಕ್ಕೆ ಬಿಡುವಿಲ್ಲದ ವೇಳಾಪಟ್ಟಿಯಿರುವುದೇ ಇದಕ್ಕೆ ಕಾರಣ ಎಂದು ದ್ರಾವಿಡ್ ಹೇಳಿದ್ದಾರೆ.
ಹೀಗಾಗಿ ಕ್ವಾರಂಟೈನ್ ಬಳಿಕ ಒಬ್ಬ ಆಟಗಾರನಿಗೆ ಕೊರೋನಾ ಇದೆ ಎಂದು ಗೊತ್ತಾದರೂ ಪಂದ್ಯ ನಡೆಯುವಂತಹ ವ್ಯವಸ್ಥೆ ನಾವು ಮಾಡಬೇಕು ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ‘ಒಂದು ವೇಳೆ ಹದಿನಾಲ್ಕು ದಿನಗಳ ಕ್ವಾರಂಟೈನ್ ಮುಗಿಸಿ, ಪಂದ್ಯಕ್ಕೆ ಎಲ್ಲಾ ತಯಾರು ಮಾಡಿದ ಮೇಲೆ ಎರಡು ದಿನ ಮೊದಲು ಒಬ್ಬ ಆಟಗಾರನಿಗೆ ಕೊರೋನಾ ಇದೆ ಎಂದು ಗೊತ್ತಾದರೆ? ಇಷ್ಟೆಲ್ಲಾ ತಯಾರು ಮಾಡಿ, ವೆಚ್ಚ ಮಾಡಿ ಏನು ಪ್ರಯೋಜನವಾಯಿತು? ಹೀಗಾಗಿ ಒಬ್ಬ ಆಟಗಾರನಿಂದಾಗಿ ಪಂದ್ಯ ನಿಲ್ಲದಂತೆ ಮಾಡುವ ವ್ಯವಸ್ಥೆಗೆ ನಾವು ಮುಂದಾಗಬೇಕು’ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.