Publish Date: Thu, 02 Nov 2017 (08:30 IST)
Updated Date: Thu, 02 Nov 2017 (08:32 IST)
ಬರೋಡಾ: ಟೀಂ ಇಂಡಿಯಾದಲ್ಲಿ ಒಂದು ಕಾಲದಲ್ಲಿ ಸ್ಥಿರ ಸದಸ್ಯನಾಗಿದ್ದ ಇರ್ಫಾನ್ ಪಠಾಣ್ ರನ್ನು ತವರು ಬರೋಡಾ ರಣಜಿ ತಂಡದಿಂದ ಇದ್ದಕ್ಕಿದ್ದಂತೆ ಕಿತ್ತು ಹಾಕಿದ್ದಕ್ಕೆ ಅವರು ಸಿಟ್ಟಿಗೆದ್ದಿದ್ದಾರೆ.
ಈ ಸಾಲಿನ ರಣಜಿ ಪಂದ್ಯಾವಳಿಯ ಮೊದಲೆರಡು ಪಂದ್ಯಗಳಿಗೆ ಇರ್ಫಾನ್ ಬರೋಡಾ ತಂಡದ ನಾಯಕರಾಗಿದ್ದರು. ಮೊದಲನೇ ಪಂದ್ಯದಲ್ಲಿ 80 ರನ್ ಸಿಡಿಸಿದ್ದಲ್ಲದೆ, ಎರಡು ಪಂದ್ಯಗಳಿಂದ ಎರಡು ವಿಕೆಟ್ ಕಿತ್ತಿದ್ದರು.
ಆದರೆ ಅಂಕಪಟ್ಟಿಯಲ್ಲಿ ತೀರಾ ಹಿಂದಿರುವ ಬರೋಡಾ ತಂಡದ ನಾಯಕನ ಸ್ಥಾನದಿಂದ ಮೂರನೇ ಪಂದ್ಯಕ್ಕಾಗುವಾಗ ಪಠಾಣ್ ರನ್ನು ಕಾರಣ ನೀಡದೇ ಕಿತ್ತು ಹಾಕಲಾಗಿದೆ. ಅಷ್ಟೇ ಅಲ್ಲದೆ, 15 ಮಂದಿಯ ತಂಡದಲ್ಲಿ ಕೇವಲ ಆಟಗಾರನಾಗಿಯೂ ಪಠಾಣ್ ಗೆ ಸ್ಥಾನ ನೀಡಲಾಗಿಲ್ಲ.
ಇದಕ್ಕೆ ಸಿಟ್ಟಿಗೆದ್ದಿರುವ ಇರ್ಫಾನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಖಡಕ್ ಉತ್ತರ ನೀಡಿದ್ದಾರೆ. ‘ನಿಮ್ಮ ಬಾಸ್ ಗೆ ಗುಡ್ ಮಾರ್ನಿಂಗ್ ಎಂದು ವಿಶ್ ಮಾಡದೇ ಇರುವುದು, ಎಲ್ಲದಕ್ಕೂ ನೀವೇ ಸರಿ ಎನ್ನುತ್ತಿದ್ದರೆ ಅದು ನಿಮಗೆ ಒಳ್ಳೆಯದು ಮಾಡದು. ಆದರೂ ಪರವಾಗಿಲ್ಲ’ ಎಂದು ಪಠಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಈ ಟ್ವೀಟ್ ಗೆ ಹಲವು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ