Publish Date: Sun, 21 Jul 2019 (09:01 IST)
Updated Date: Sun, 21 Jul 2019 (09:03 IST)
ನವದೆಹಲಿ: ವೆಸ್ಟ್ ಇಂಡೀಸ್ ಸರಣಿಗೆ ಧೋನಿಯನ್ನು ಆಯ್ಕೆ ಮಾಡಬೇಕೋ ಬೇಡವೋ ಎಂಬ ಆಯ್ಕೆ ಸಮಿತಿ ಗೊಂದಲಕ್ಕೆ ಅವರೇ ಪರಿಹಾರ ನೀಡಿದ್ದಾರೆ.
ಧೋನಿ ಆಯ್ಕೆಯಾಗುತ್ತಾರೋ ಎಂಬ ಪ್ರಶ್ನೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಉತ್ತರ ನೀಡಿದ್ದು, ಧೋನಿ ಮುಂದಿನ ಎರಡು ತಿಂಗಳು ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂಬ ಸಂಗತಿಯನ್ನು ಹೊರಹಾಕಿದ್ದಾರೆ.
ಭಾರತೀಯ ಸೇನೆಯ ಗೌರವಯುತ ಸದಸ್ಯರಾಗಿರುವ ಧೋನಿ ಲೆಫ್ಟಿನೆಂಟ್ ಕರ್ನಲ್ ರ್ಯಾಂಕ್ ಹೊಂದಿದ್ದಾರೆ. ಇದನ್ನು ಕೇವಲ ಲೆಕ್ಕಕ್ಕೆ ಮಾತ್ರ ಇರುವ ಪದವಿ ಎಂದು ಸೀಮಿತಗೊಳಿಸದೇ ಎರಡು ತಿಂಗಳು ಭಾರತೀಯ ಪ್ಯಾರಾಚ್ಯೂಟ್ ರೆಜಿಮೆಂಟ್ ನಲ್ಲಿ ಪಕ್ಕಾ ಯೋಧನಾಗಿ ಸೇವೆ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಕ್ರಿಕೆಟ್ ಕೂಟಕ್ಕೂ ಮೊದಲೇ ಧೋನಿ ಈ ವಿಚಾರವನ್ನು ಆಯ್ಕೆ ಸಮಿತಿ ಮುಂದೆ ಸ್ಪಷ್ಟಪಡಿಸಿದ್ದರಂತೆ. ಹಾಗಾಗಿ ವಿಂಡೀಸ್ ಸರಣಿಯಿಂದ ಹೊರಗುಳಿಯುವುದಾಗಿ ಹೇಳಿದ್ದರಂತೆ. ಹೀಗಾಗಿ ಧೋನಿ ನಿವೃತ್ತಿ ಬಗ್ಗೆ ಎಲ್ಲಾ ರೂಮರ್ ಗಳಿಗೆ ಸದ್ಯಕ್ಕೆ ತೆರೆ ಬಿದ್ದಿದೆ.