Publish Date: Sun, 21 Jul 2019 (08:57 IST)
Updated Date: Sun, 21 Jul 2019 (08:59 IST)
ಮುಂಬೈ: ಹಣ್ಣೆಲೆ ಉದುರಿದಾಗ ಕಾಯಿ ಎಲೆ ನಕ್ಕಿತಂತೆ.. ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರ ಸ್ಥಿತಿಯೂ ಇದೇ ಆಗಿದೆ. ಹಿಂದೆ ಗಂಗೂಲಿಗೂ ಇದೇ ಆಗಿತ್ತು. ಈಗ ಧೋನಿಯೂ ಅದೇ ಸ್ಥಿತಿಯಲ್ಲಿದ್ದಾರೆ.
ಗಂಗೂಲಿ ತಾವು ನಾಯಕರಾದಾಗ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಹಿರಿಯ ಆಟಗಾರರನ್ನು ನಿರ್ಲಕ್ಷಿಸಿದರು. ಕೊನೆಗೆ ಅವರ ವೃತ್ತಿ ಜೀವನದ ಸಂಧ್ಯಾ ಕಾಲದಲ್ಲಿ ನಾಯಕನ ಪಟ್ಟ ಕೈತಪ್ಪಿದ್ದೂ ಅಲ್ಲದೆ, ಸ್ಥಾನ ಪಡೆಯಲೂ ಹೆಣಗಾಡಿದರು.
ಈಗ ಧೋನಿಯೂ ಅದೇ ಸ್ಥಿತಿಯಲ್ಲಿದ್ದಾರೆ. ತಾವು ನಾಯಕರಾಗಿದ್ದಾಗ ದ್ರಾವಿಡ್, ಗಂಗೂಲಿಯಂತಹ ಹಿರಿಯ ಆಟಗಾರರು ಫೀಲ್ಡಿಂಗ್ ನಲ್ಲಿ ಚುರುಕಾಗಿಲ್ಲ ಎಂದು ಅವರನ್ನು ಏಕದಿನ ತಂಡದಿಂದಲೇ ಹೊರಗಿಡುವ ದೊಡ್ಡ ನಿರ್ಧಾರ ಮಾಡಿದರು. ಇದು ತಂಡದ ಭವಿಷ್ಯದ ದೃಷ್ಟಿಯಿಂದ ತಕ್ಕುದಾಗಿಯೇ ಇತ್ತೂ ಕೂಡಾ.
ಯಾವುದೇ ಕ್ರಿಕೆಟ್ ತಂಡವೂ ಭವಿಷ್ಯದ ತಂಡವನ್ನು ಕಟ್ಟುವುದು ಮುಖ್ಯ. ಹೀಗಾಗಿ ಗಂಗೂಲಿ ಆಗಲಿ, ಧೋನಿ ಆಗಲಿ ಅಂದು ಯುವ ಆಟಗಾರರನ್ನು ಬೆಳೆಸಿದ್ದಕ್ಕೇ ಸುರೇಶ್ ರೈನಾ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ರಂತಹ ಆಟಗಾರರು ಇಂದು ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಲು ಸಾಧ್ಯವಾಗಿದ್ದು.
ಆದರೆ ದುರಾದೃಷ್ಟವೆಂದರೆ ಅಂದು ಆ ಹಿರಿಯ ಕ್ರಿಕೆಟಿಗರು ಅನುಭವಿಸಿದ ಸಂಕಟವನ್ನು ಇಂದು ಧೋನಿಯೂ ಅನುಭವಿಸುತ್ತಿದ್ದಾರೆ. ಟೀಂ ಇಂಡಿಯಾವನ್ನು ಯಶಸ್ಸಿನ ತುತ್ತ ತುದಿಗೆ ಕೊಂಡೊಯ್ದ ನಾಯಕ ಈಗ ವಯಸ್ಸಾಯಿತು ಎಂಬ ಕಾರಣಕ್ಕೆ ನಿವೃತ್ತಿಯಾಗಬೇಕೆಂಬ ಒತ್ತಡದಲ್ಲಿದ್ದಾರೆ. ಅವರಿಗೆ ಇದು ಇಷ್ಟವಿದ್ದೋ, ಇಲ್ಲದೆಯೋ ಅಂತೂ ಈ ಒತ್ತಡವನ್ನಂತೂ ಎದುರಿಸುತ್ತಿದ್ದಾರೆ. ಈಗ ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿಯೂ ಇದೇ ಪರಿಸ್ಥಿತಿಯನ್ನು ಮುಂದೊಂದು ದಿನ ಎದುರಿಸಬಹುದು. ಆದರೆ ಹಿರಿಯ ಆಟಗಾರರಿಗೆ ಗೌರವದ ಬೀಳ್ಕೊಡುಗೆ ನೀಡುವ ಔದಾರ್ಯವನ್ನು ಬಿಸಿಸಿಐ ಮಾಡಬೇಕಷ್ಟೇ.
ಇಂದು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಆಯ್ಕೆ ನಡೆಯಲಿದ್ದು, ಧೋನಿ ಆಯ್ಕೆಯಾಗುತ್ತಾರೋ ಇಲ್ಲವೋ ಎಂಬುದೇ ದೊಡ್ಡ ಕುತೂಹಲವಾಗಿ ಉಳಿದಿದೆ.