Publish Date: Tue, 02 Oct 2018 (06:38 IST)
Updated Date: Tue, 02 Oct 2018 (06:39 IST)
ಮುಂಬೈ: ಇಂಗ್ಲೆಂಡ್ ಸರಣಿಯಲ್ಲಿ ಆಡುವ ಬಳಗದಲ್ಲಿದ್ದೂ ಅವಕಾಶ ಸಿಗಲಿಲ್ಲ. ಇದೀಗ ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದಲ್ಲೇ ಇಲ್ಲ. ಇದು ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ದ್ವಿತೀಯ ಆಟಗಾರ ಕರುಣ್ ನಾಯರ್ ದುಸ್ಥಿತಿ.
ಹಾಗಿದ್ದರೂ ಕರುಣ್ ನಾಯರ್ ಗೆ ಸ್ಥಾನ ನೀಡದೇ ಇರಲು ಕಾರಣವೇನು ಎಂಬುದಕ್ಕೆ ಇದೀಗ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸಮಜಾಯಿಷಿ ನೀಡಿದ್ದಾರೆ.
‘ಕರುಣ್ ಇಂಗ್ಲೆಂಡ್ ನಲ್ಲಿದ್ದಾಗಲೇ ನಾವು ಅವರ ಬಳಿ ಈ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದೆವು. ಅವರಿಗೆ ಅವಕಾಶ ಸಿಗದೇ ಇರುವುದು ದುರದೃಷ್ಟಕರ. ಆದರೆ ಮಾತುಕತೆ ಮೂಲಕ ನಾವು ಎಲ್ಲವನ್ನೂ ಸ್ಪಷ್ಟವಾಗಿ ತಿಳಿಸಿದ್ದೇವೆ. ಮುಂದೆ ರಣಜಿ ಟ್ರೋಫಿ, ಭಾರತ ಎ ಕ್ರಿಕೆಟ್ ಸರಣಿ ಸೇರಿದಂತೆ ದೇಶೀಯ ಟೂರ್ನಿಗಳು ಬರಲಿವೆ. ಅದರಲ್ಲಿ ಉತ್ತಮ ರನ್ ಗಳಿಸಲಿ. ಕರುಣ್ ರನ್ನು ನಾವು ಟೆಸ್ಟ್ ತಂಡದಿಂದ ಸಂಪೂರ್ಣವಾಗಿ ಮೂಲೆಗುಂಪು ಮಾಡಿಲ್ಲ. ಮುಂದೆ ದೇಶೀಯ ಟೂರ್ನಿಯಲ್ಲಿ ಆಡಿದಾಗ ಅವರಿಗೆ ಖಂಡಿತಾ ಸ್ಥಾನ ಸಿಗುತ್ತದೆ’ ಎಂದು ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಆಡುವ ಬಳಗದಲ್ಲಿ ಸ್ಥಾನ ನೀಡದೇ ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಹೇಗೆ ಸಾಧ್ಯ? ಇದನ್ನು ಆಯ್ಕೆಗಾರರೇ ಹೇಳಬೇಕು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.