Publish Date: Sun, 14 Nov 2021 (10:11 IST)
Updated Date: Sun, 14 Nov 2021 (10:12 IST)
ಮುಂಬೈ: ರಾಹುಲ್ ದ್ರಾವಿಡ್ ರಿಂದ ತೆರವಾದ ನ್ಯಾಷನಲ್ ಕ್ರಿಕೆಟ್ ಅಕಾಡಮಿ ಮುಖ್ಯಸ್ಥ ಸ್ಥಾನವನ್ನು ತುಂಬಲು ಮಾಜಿ ಬ್ಯಾಟಿಂಗ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅಂತೂ ಇಂತೂ ಒಪ್ಪಿಗೆ ನೀಡಿದ್ದಾರೆ.
ಈ ಮೊದಲು ದ್ರಾವಿಡ್ ಎನ್ ಸಿಎ ಮುಖ್ಯಸ್ಥರಾಗಿದ್ದರು. ಆದರೆ ಈಗ ದ್ರಾವಿಡ್ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಹೀಗಾಗಿ ಯುವ ಆಟಗಾರರನ್ನು ತರಬೇತುಗೊಳಿಸುವ ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕೆ ಸಮರ್ಥರನ್ನೇ ಕರೆತರಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತೀರ್ಮಾನಿಸಿದ್ದರು.
ಅದರಂತೆ ವಿವಿಎಸ್ ಲಕ್ಷ್ಮಣ್ ಗೆ ಈ ಹುದ್ದೆ ವಹಿಸಿಕೊಳ್ಳಲು ಕೋರಿದ್ದರು. ಆದರೆ ಐಪಿಎಲ್ ನಲ್ಲಿ ಹೈದರಾಬಾದ್ ತಂಡ ಬ್ಯಾಟಿಂಗ್ ಸಲಹೆಗಾರ ಮತ್ತು ಬಂಗಾಳ ಕ್ರಿಕೆಟ್ ತಂಡದ ಸಲಹೆಗಾರರಾಗಿರುವ ಲಕ್ಷ್ಮಣ್ ಎನ್ ಸಿಎ ಹುದ್ದೆ ಅಲಂಕರಿಸಲು ಹಿಂದೇಟು ಹಾಕಿದ್ದರು. ಆದರೆ ಇದೀಗ ಗಂಗೂಲಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಒತ್ತಡಕ್ಕೆ ಮಣಿದು ಎನ್ ಸಿಎ ಮುಖ್ಯಸ್ಥರಾಗಿ ಮತ್ತು ಭಾರತ ಅಂಡರ್ 19 ಮತ್ತು ಎ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲು ಒಪ್ಪಿದ್ದಾರೆ ಎನ್ನಲಾಗಿದೆ.