Publish Date: Sun, 17 Sep 2017 (08:46 IST)
Updated Date: Sun, 17 Sep 2017 (08:48 IST)
ಚೆನ್ನೈ: ಭಾರತ ಮತ್ತೊಂದು ಸರಣಿಗೆ ಸಜ್ಜಾಗಿದೆ. ಈ ಬಾರಿ ಪ್ರಬಲ ಆಸ್ಟ್ರೇಲಿಯಾ ಜತೆಗೆ. ಆದರೆ ವಿರಾಟ್ ಕೊಹ್ಲಿಗೆ ತಮ್ಮ ತಂಡದ ಆಟಗಾರರಲ್ಲಿ ಯಾರನ್ನು ಆರಿಸುವುದು, ಯಾರನ್ನು ಬಿಡುವುದು ಎಂಬುದೇ ಚಿಂತೆಯಾಗಿದೆ.
ಕೊಹ್ಲಿ ತಂಡದಲ್ಲಿ ಈಗ ಎಲ್ಲರೂ ಪ್ರತಿಭಾವಂತರೇ.. ಎಲ್ಲರೂ ಫಾರ್ಮ್ ನಲ್ಲಿರುವವರೇ. ಆದರೆ ಯಾರನ್ನು ತಂಡಕ್ಕೆ ಆರಿಸುವುದು, ಯಾವ ಸ್ಥಾನದಲ್ಲಿ ಆಡಿಸುವುದು ಎಂಬುದೇ ದೊಡ್ಡ ತಲೆನೋವಾಗಿದೆ.
ಶಿಖರ್ ಧವನ್ ತಂಡದಿಂದ ಹೊರಗುಳಿದಿರುವುದರಿಂದ ಅಜಿಂಕ್ಯಾ ರೆಹಾನೆಗೆ ಆಡುವ ಅವಕಾಶ ದೊರಕಲಿದೆ. ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಕೊಹ್ಲಿ ಚಿಂತನೆ ನಡೆಸಿದ್ದಾರೆ. ಆದರೆ ಕೆಎಲ್ ರಾಹುಲ್ ಮತ್ತೆ ಮಧ್ಯಮ ಕ್ರಮಾಂಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.
ಹಾಗಾದರೆ ಮತ್ತೊಂದು ಕ್ರಮಾಂಕಕ್ಕೆ ಮನೀಶ್ ಮತ್ತು ಕೇದಾರ್ ಜಾದವ್ ನಡುವೆ ಪೈಪೋಟಿ ನಡೆಯಲಿದೆ ಎನ್ನುವುದು ಕೊಹ್ಲಿ ಅಭಿಪ್ರಾಯ. ರಾಹುಲ್ ಕೊಂಚ ಮಂಕಾಗಿದ್ದರೂ, ಸೂಕ್ತ ಸಮಯದಲ್ಲಿ ಫಾರ್ಮ್ ಗೆ ಮರಳುತ್ತಾರೆ ಎಂಬ ವಿಶ್ವಾಸದಲ್ಲಿ ನಾಯಕ ಕೊಹ್ಲಿ ಇದ್ದಾರೆ.
ಆದರೆ ಯಾರೂ ತಮಗೆ ಇಂತಹದ್ದೇ ಕ್ರಮಾಂಕ ಬೇಕೆಂದು ಪಟ್ಟು ಹಿಡಿದು ಕೂರಲಾಗದು. ಹಾಗೆ ಪಟ್ಟು ಹಿಡಿದರೆ ತಂಡದ ಸಮತೋಲನ ತಪ್ಪಬಹುದು ಎಂಬ ಭೀತಿ ಕೊಹ್ಲಿಗಿದೆ. ಹಾಗಾಗಿ ಸಿಕ್ಕಿದ ಸ್ಥಾನದಲ್ಲಿ ಚೆನ್ನಾಗಿ ಆಡಿ ತಂಡಕ್ಕೆ ಸಮತೋಲನ ನೀಡಿ ಎಂದು ಕೊಹ್ಲಿ ತಮ್ಮ ಆಟಗಾರರಿಗೆ ಕರೆ ಕೊಟ್ಟಿದ್ದಾರೆ.