Publish Date: Tue, 08 Sep 2026 (09:57 IST)
Updated Date: Tue, 08 Sep 2026 (10:00 IST)
ಕೇರಳ ಕ್ರಿಕೆಟ್ ಲೀಗ್ (KCL) ನ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಭಾರತದ ಪ್ರಸಿದ್ಧ ವಿಕೆಟ್ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ಮಾಜಿ ವೇಗಿ ಎಸ್. ಶ್ರೀಶಾಂತ್ ಪರಸ್ಪರ ಕೈಕುಲುಕದೆ ನಿರ್ಲಕ್ಷಿಸಿರುವ ಘಟನೆ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಏನಿದು ವಿವಾದ?
ಇತ್ತೀಚೆಗೆ ನಡೆದ ಕೆಸಿಎಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀಶಾಂತ್ ವೇದಿಕೆಯಲ್ಲಿದ್ದ ಗಣ್ಯರಿಗೆ ಹಸ್ತಲಾಘವ ಮಾಡುತ್ತಾ ಸಾಗುವಾಗ, ಸಂಜು ಸ್ಯಾಮ್ಸನ್ ಅವರ ಬಳಿ ಬಂದಾಗ ಇಬ್ಬರೂ ಮುಖಾಮುಖಿ ನೋಡುವುದನ್ನಾಗಲಿ ಅಥವಾ ಹಸ್ತಲಾಘವ ಮಾಡುವುದನ್ನಾಗಲಿ ಸಂಪೂರ್ಣವಾಗಿ ತಪ್ಪಿಸಿದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬೆಂಕಿಯಂತೆ ಹಬ್ಬಿದ್ದು, ಇಬ್ಬರ ನಡುವಿನ ಶೀತಲ ಸಮರವನ್ನು ಬಯಲಿಗೆಳೆದಿದೆ.
ವಿವಾದಕ್ಕೆ ಕಾರಣವೇನು?
ಮೂಲಗಳ ಪ್ರಕಾರ, ಈ ಭೇದಭಾವದ ಹಿಂದೆ ರಾಜಸ್ಥಾನ್ ರಾಯಲ್ಸ್ (RR) ತಂಡಕ್ಕೆ ಸಂಜು ಸ್ಯಾಮ್ಸನ್ ಆಯ್ಕೆಯಾದ ಕಥೆಯಿದೆ:
ಕ್ರೇಡಿಟ್ ಪಡೆದ ಶ್ರೀಶಾಂತ್: ಶ್ರೀಶಾಂತ್ ಹಲವು ಸಂದರ್ಶನಗಳಲ್ಲಿ ತಾವು ರಾಜಸ್ಥಾನ್ ರಾಯಲ್ಸ್ ನಾಯಕ ರಾಹುಲ್ ದ್ರಾವಿಡ್ ಅವರಿಗೆ ಸುಳ್ಳು ಹೇಳಿ, ತಮ್ಮ ಸ್ವಂತ ಖರ್ಚಿನಲ್ಲಿ ಸಂಜು ಅವರ ಪ್ರಯಾಣದ ಟಿಕೆಟ್ ಬುಕ್ ಮಾಡಿ ಟ್ರಯಲ್ಸ್ಗೆ ಕರೆದೊಯ್ದಿದ್ದಾಗಿ ಹಾಗೂ ಸಂಜು ಅವರ ಐಪಿಎಲ್ ವೃತ್ತಿಜೀವನಕ್ಕೆ ತಾವೇ ಮುಖ್ಯ ಕಾರಣ ಎಂದು ಹಕ್ಕು ಸಾಧಿಸುತ್ತ ಬಂದಿದ್ದರು.
ಸಂಜು ಸ್ಪಷ್ಟನೆ: ಈ ಕುರಿತು ಅಸಮಾಧಾನಗೊಂಡಿದ್ದ ಸಂಜು ಸ್ಯಾಮ್ಸನ್, ತಮಗೆ ರಾಹುಲ್ ದ್ರಾವಿಡ್ ಅವರಿಂದ ನೇರ ಕರೆ ಬಂದಿತ್ತು ಮತ್ತು ತಮ್ಮ ಪ್ರತಿಭೆಯ ಬಲದಿಂದ ಆಯ್ಕೆಯಾಗಿದ್ದಾಗಿ ಸ್ಪಷ್ಟಪಡಿಸಿದ್ದರು. ಇತರರು ತಮ್ಮ ಹೆಸರನ್ನು ಬಳಸಿ ಕ್ರೆಡಿಟ್ ತೆಗೆದುಕೊಳ್ಳುತ್ತಿರುವುದಕ್ಕೆ ಸಂಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ಹಿಂದೆ ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ಸಿಲುಕಿ ಕ್ರಿಕೆಟ್ ಜಗತ್ತಿನಿಂದ ಬ್ಯಾನ್ ಆಗಿದ್ದ ಶ್ರೀಶಾಂತ್, ತಮ್ಮ ಸಹಪಾಠಿ ಆಟಗಾರರ ಹೆಸರನ್ನು ಬಳಸಿ ಮೈಲೇಜ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಹರಭಜನ್ ಸಿಂಗ್ ಅವರೊಂದಿಗಿನ ವಿವಾದಾತ್ಮಕ ಕಪಾಳಮೋಕ್ಷ ಘಟನೆಯಿಂದ ಹಿಡಿದು ಬಿಗ್ ಬಾಸ್ ಶೋವರೆಗೆ ಸದಾ ವಿವಾದದಲ್ಲೇ ತೇಲುವ ಶ್ರೀಶಾಂತ್, ತಮ್ಮ ಸ್ವಂತ ಕಿರಿಯ ಆಟಗಾರನ ಯಶಸ್ಸಿನ ಶ್ರೇಯಸ್ಸನ್ನು ಕದಿಯಲು ಯತ್ನಿಸುತ್ತಿದ್ದಾರೆ ಎಂದು ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ. ತಮ್ಮ ಸ್ವಾಭಿಮಾನ ಮತ್ತು ಶ್ರೇಷ್ಠ ಗೌರವವನ್ನು ಎತ್ತಿಹಿಡಿದು, ಇಂತಹ ನಾಟಕೀಯ ನಡವಳಿಕೆಗೆ ಸ್ಪಂದಿಸದೆ ಹಸ್ತಲಾಘವ ಮಾಡದಿರುವ ಸಂಜು ಸ್ಯಾಮ್ಸನ್ ಅವರ ನಿರ್ಧಾರಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ