Publish Date: Mon, 23 Sep 2019 (08:41 IST)
Updated Date: Mon, 23 Sep 2019 (08:44 IST)
ಬೆಂಗಳೂರು: ತನ್ನ ಕಳಪೆ ಬ್ಯಾಟಿಂಗ್ ಗೆ ಬೆಲೆ ತೆತ್ತ ಟೀಂ ಇಂಡಿಯಾ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟಿ20 ಪಂದ್ಯ ಸೋಲುವುದರೊಂದಿಗೆ ಸರಣಿ ಗೆಲುವು ಕೈ ಜಾರಿಸಿಕೊಂಡಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದ ಎರಡು ಓವರ್ ಉತ್ತಮವಾಗಿ ರನ್ ಕಲೆ ಹಾಕುವ ಮೂಲಕ ಅದ್ಭುತ ಆರಂಭ ನೀಡಿತು. ಆದರೆ ನಂತರ ರೋಹಿತ್ ಶರ್ಮಾ ಔಟಾದ ಬಳಿಕ ಒಬ್ಬೊಬ್ಬರಾಗಿ ಪೆವಿಲಿಯನ್ ಪೆರೇಡ್ ನಡೆಸಿದ್ದರಿಂದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 134 ರನ್ ಗಳಿಸಲಷ್ಟೇ ಶಕ್ತವಾಯಿತು. ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ 19 ರನ್ ಗಳಿಸಿದ್ದೇ ಗರಿಷ್ಠ ಸಾಧನೆಯಾಯಿತು. ಆಫ್ರಿಕಾ ಪರ ಕಗಿಸೊ ರಬಾಡ 3 ವಿಕೆಟ್ ಮತ್ತು ಬೋರ್ನ್ ಫಾರ್ಟ್ವಿನ್ ಮತ್ತು ಬ್ಯೂರನ್ ಹೆಂಡ್ರಿಕ್ಸ್ ತಲಾ 2 ವಿಕೆಟ್ ಕಬಳಿಸಿದರು.
ಈ ಮೊತ್ತ ಚಿನ್ನಸ್ವಾಮಿಯಂತಹ ಅಂಗಣದಲ್ಲಿ ಆಫ್ರಿಕನ್ನರಿಗೆ ಸುಲಭ ತುತ್ತಾಯಿತು. ನಾಯಕ ಕ್ವಿಂಟನ್ ಡಿ ಕಾಕ್ ಅಜೇಯ 79 ಮತ್ತು ಟೆಂಬ ಬವುಮ ಅಜೇಯ 27 ರನ್ ಗಳಿಸಿ ಸುಲಭ ಜಯ ಗಳಿಸಿಕೊಟ್ಟರು. ಇದರಿಂದಾಗಿ ಆಫ್ರಿಕಾ 16.5 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿ 9 ವಿಕೆಟ್ ಗಳ ಭರ್ಜರಿ ಜಯ ಕಂಡುಕೊಂಡಿತು. ಇದರೊಂದಿಗೆ ಆಫ್ರಿಕಾ ವಿರುದ್ಧ ತವರಿನಲ್ಲಿ ಟಿ20 ಸರಣಿ ಗೆದ್ದು ಈ ದಾಖಲೆ ಮಾಡಿದ ಮೊದಲ ನಾಯಕ ಎಂಬ ಹೆಗ್ಗಳಿಕೆ ಮಾಡುವ ವಿರಾಟ್ ಕೊಹ್ಲಿ ಕನಸು ನುಚ್ಚುನೂರಾಯಿತು.