Publish Date: Mon, 24 Feb 2025 (09:33 IST)
Updated Date: Mon, 24 Feb 2025 (09:35 IST)
ಬೆಂಗಳೂರು: ಡಬ್ಲ್ಯುಪಿಎಲ್ ಕೂಟದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರು ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶುಕ್ರವಾರ ನಡೆದಿದ್ದ ಆರ್ ಸಿಬಿ ಪಂದ್ಯಕ್ಕೆ ಸ್ಟೇಡಿಯಂ ಹೌಸ್ ಫುಲ್ ಆಗಿತ್ತು. ಇಂದೂ ಅದೇ ರೀತಿ ಮೈದಾನ ಭರ್ತಿಯಾಗುವ ನಿರೀಕ್ಷೆಯಿದೆ.
ವಡೋದರಾದಲ್ಲಿ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದು ಬಂದಿದ್ದ ಆರ್ ಸಿಬಿ ಮೂರನೇ ಪಂದ್ಯವನ್ನು ತವರು ಚಿನ್ನಸ್ವಾಮಿ ಮೈದಾನದಲ್ಲಿ ಆಡಿದೆ. ಆದರೆ ಈ ಪಂದ್ಯವನ್ನು ಹೋರಾಡಿ ಸೋತಿತ್ತು. ಆದರೆ ಇಂದಿನ ಪಂದ್ಯದಲ್ಲಿ ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸವಿದೆ.
ಆರ್ ಸಿಬಿಗೆ ಎಲ್ಲಿಸ್ ಪೆರಿ, ಸ್ಮೃತಿ ಮಂಧನಾ, ರಿಚಾ ಘೋಷ್ ಬ್ಯಾಟಿಂಗ್ ಫಾರ್ಮ್ ವರವಾಗಿದೆ. ಬೌಲಿಂಗ್ ನಲ್ಲಿ ಕಳೆದ ಪಂದ್ಯದಲ್ಲಿ ಮೈನ್ ಬೌಲರ್ ರೇಣುಕಾ ಸಿಂಗ್ ಅಷ್ಟೇನೂ ಪ್ರಭಾವ ಬೀರಿರಲಿಲ್ಲ. ಆದರೆ ಕಿಮ್ ಗ್ರಾಥ್ ಆ ಕೊರತೆ ನೀಗಿಸಿದ್ದರು.
ಇತ್ತ ಯುಪಿ ವಾರಿಯರ್ಸ್ ಮೊದಲ ಎರಡು ಪಂದ್ಯಗಳನ್ನು ಸತತವಾಗಿ ಸೋತರೂ ಮೂರನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದು ಆತ್ಮವಿಶ್ವಾಸ ಪಡೆದುಕೊಂಡಿದೆ. ಭಾರತೀಯ ಮೂಲದ ದೀಪ್ತಿ ಶರ್ಮ ನಾಯಕಿಯಾಗಿರುವ ತಂಡದಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ ವಾಡ್ ಕೂಡಾ ಇದ್ದಾರೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಜಿಯೋ ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.