Publish Date: Tue, 26 Feb 2019 (10:33 IST)
Updated Date: Tue, 26 Feb 2019 (10:35 IST)
ಕೋಲ್ಕೊತ್ತಾ: ಪುಲ್ವಾಮಾ ದಾಳಿಯ ನಂತರವೂ ಭಾರತ ಪಾಕಿಸ್ತಾನ ವಿರುದ್ಧ ವಿಶ್ವಕಪ್ ನಲ್ಲಿ ಆಡಿ ಸೋಲಿಸಬೇಕು ಎಂದಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೇಳಿಕೆಯನ್ನು ಟೀಕೆ ಮಾಡಲು ಹೋಗಿ ವಿವಾದವಾಗುತ್ತಿದ್ದಂತೆ ಮಾಜಿ ನಾಯಕ ಸೌರವ್ ಗಂಗೂಲಿ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಪಾಕ್ ವಿರುದ್ಧ ಆಡದೇ ಅವರಿಗೆ ಎರಡು ಪಾಯಿಂಟ್ ಸುಮ್ಮನೇ ಬಿಟ್ಟುಕೊಟ್ಟು ಪಂದ್ಯ ಕಳೆದುಕೊಳ್ಳುವುದು ನನಗಿಷ್ಟವಿಲ್ಲ. ಬದಲಾಗಿ ಅವರನ್ನು ಆಡಿ ಸೋಲಿಸಬೇಕು ಎಂದು ಸಚಿನ್ ಹೇಳಿದ್ದರು. ಇದಕ್ಕೆ ಖಾಸಗಿ ವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ್ದ ಗಂಗೂಲಿ ಸಚಿನ್ ಗೆ ಎರಡು ಅಂಕ ಮಾತ್ರ ಬೇಕು, ನನಗೆ ವಿಶ್ವಕಪ್ ಬೇಕು ಎಂದಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಗಂಗೂಲಿ ‘ಸಚಿನ್ ಮತ್ತು ನನ್ನ ನಡುವೆ ಯಾವುದೇ ವಿರೋಧವಿಲ್ಲ. ಆತ ನನಗೆ 25 ವರ್ಷಗಳಿಂದ ಸ್ನೇಹಿತ. ಅವರ ವಿರುದ್ಧವಾಗಿ ನಾನು ಹೇಳಿಕೆ ಕೊಟ್ಟಿಲ್ಲ’ ಎಂದಿದ್ದಾರೆ. ಇದೀಗ ಗಂಗೂಲಿ ಸ್ಪಷ್ಟೀಕರಣದ ಬಗ್ಗೆ ಹೇಳಿಕೆ ನೀಡಿರುವ ಸಚಿನ್, ಗಂಗೂಲಿ ಹೀಗೆ ಸ್ಪಷ್ಟನೆ ಕೊಡಬೇಕಾದ ಅಗತ್ಯವಿಲ್ಲ. ನಾವೆಲ್ಲರೂ ದೇಶದ ಹಿತವನ್ನೇ ಬಯಸುತ್ತೇವೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.