Publish Date: Tue, 26 Feb 2019 (09:31 IST)
Updated Date: Tue, 26 Feb 2019 (09:35 IST)
ನವದೆಹಲಿ: ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿ 40 ಸಿಆರ್ ಪಿಎಫ್ ಯೋಧರ ಮಾರಣ ಹೋಮಕ್ಕೆ ಕಾರಣವಾಗಿದ್ದ ಪಾಕ್ ಪ್ರೇರಿತ ಉಗ್ರರ ಮೇಲೆ ಭಾರತೀಯ ಸೇನೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ.
ಬೆಳಗಿನ ಜಾವ 3.30 ರ ಸುಮಾರಿಗೆ ಭಾರತೀಯ ವಾಯು ಸೇನೆ ಉಗ್ರರ ಅಡಗುತಾಣದ ಮೇಲೆ 1000 ಕೆ.ಜಿ. ತೂಕದ ಬಾಂಬ್ ಸುರಿದು ಉಗ್ರರ ಅಡಗುದಾಣವನ್ನು ಸರ್ವ ನಾಶ ಮಾಡಿದೆ. ದಾಳಿಯಲ್ಲಿ ಸುಮಾರು 100 ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಇದೀಗ ದಾಳಿ ಸಂಪೂರ್ಣಗೊಂಡ ಮೇಲೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಧಾನಿ ಮೋದಿಗೆ ಮಾಹಿತಿ ನೀಡುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಭಾರತೀಯ ವಾಯು ಸೇನೆ ಅಧಿಕೃತ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಿದೆ.
ಭಾರತೀಯ ವಾಯುಸೇನೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದೆ. ಆದರೆ ಎಂದಿನಂತೆ ಪಾಕ್ ತನ್ನ ನೆಲದಲ್ಲಿ ಯಾವುದೇ ದಾಳಿಯಾಗಿಲ್ಲ ಎಂದು ತಿಪ್ಪೆ ಸಾರಿದೆ. ಆದರೆ ಮೂಲಗಳ ಪ್ರಕಾರ 12 ಮಿರಾಜ್ ಯುದ್ಧ ವಿಮಾನಗಳ ಮೂಲಕ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಈ ಮೂಲಕ ಪುಲ್ವಾಮಾ ದಾಳಿಗೆ ದೇಶವೇ ಬಯಸಿದಂತೆ ಭಾರತೀಯ ಸೇನೆ ತಕ್ಕ ಪ್ರತೀಕಾರ ತೀರಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.