ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕಾರಿಗೆ ಲಾರಿ ಢಿಕ್ಕಿಯಾಗಿದ್ದು ಸರಣಿ ಅಪಘಾತವಾಗಿದೆ. ಗಂಗೂಲಿಗೆ ಏನಾಗಿದೆ ಇಲ್ಲಿದೆ ವಿವರ.
ಗುರುವಾರ ರಾತ್ರಿ ಘಟನೆ ನಡೆದಿದೆ. ಪಶ್ಚಿಮ ಬಂಗಾಲದ ದುರ್ಗಾಪುರ ಎಕ್ಸ್ ಪ್ರೆಸ್ ವೇಯ ದಂತನ್ ಪುರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಗುರುವಾರ ರಾತ್ರಿ ಗಂಗೂಲಿ ತಮ್ಮ ಬೆಂಗಾವಲು ಪಡೆಯೊಂದಿಗೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು.
ಈ ವೇಳೆ ಸಿಂಗೂರು ಬಳಿ ಲಾರಿಯೊಂದು ವೇಗವಾಗಿ ಬಂದು ಗಂಗೂಲಿ ಇದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ತಕ್ಷಣವೇ ಗಂಗೂಲಿ ಕಾರಿನ ಚಾಲಕ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ಇದರಿಂದಾಗಿಯೇ ಹಿಂದೆಯೇ ಬರುತ್ತಿದ್ದ ಅವರ ಬೆಂಗಾವಲು ಪಡೆಯ ಕಾರುಗಳು ಒಂದಾದ ಮೇಲೊಂದರಂತೆ ಢಿಕ್ಕಿ ಹೊಡೆದಿವೆ.
ಅದೃಷ್ಟವಶಾತ್ ಗಂಗೂಲಿ ಕೂದಲೆಳೆಯಲ್ಲಿ ಯಾವುದೇ ಅಪಾಯವಾಗದೇ ಪಾರಾಗಿದ್ದಾರೆ. ತಕ್ಷಣವೇ ಅವರು ಕಾರಿನಿಂದ ಇಳಿದಿದ್ದು ಬೇರೊಂದು ಕಾರಿನ ಮೂಲಕ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದಾರೆ.