Publish Date: Thu, 21 Aug 2025 (10:10 IST)
Updated Date: Thu, 21 Aug 2025 (10:22 IST)
ಮುಂಬೈ: ಏಷ್ಯಾ ಕಪ್ 2025 ಕ್ಕೆ ಶ್ರೇಯಸ್ ಅಯ್ಯರ್ ರನ್ನು ಆಯ್ಕೆ ಮಾಡಿಲ್ಲ ಎಂದು ಅವರ ಅಭಿಮಾನಿಗಳು ಭಾರೀ ಸಿಟ್ಟಾಗಿದ್ದಾರೆ. ಆದರೆ ಬಿಸಿಸಿಐ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಗೆ ಈಗ ಟೀಂ ಇಂಡಿಯಾದಲ್ಲಿ ಶ್ರೇಯಸ್ ಅಯ್ಯರ್ ಗೆ ಸ್ಥಾನ ಸಿಗುತ್ತಿಲ್ಲ. ಮಧ್ಯಮ ಕ್ರಮಾಂಕದ ಅನುಭವಿ, ಅತ್ಯುತ್ತಮ ಬ್ಯಾಟರ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ. ಇದರ ಬಗ್ಗೆ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಬಿಸಿಸಿಐ ಲೆಕ್ಕಾಚಾರ ಬೇರೆಯೇ ಇದೆ ಎಂದು ಈಗ ಕೇಳಿಬರುತ್ತಿರುವ ಸುದ್ದಿ. ಟೀಂ ಇಂಡಿಯಾ ಏಕದಿನ ತಂಡಕ್ಕೆ ನಾಯಕರಾಗಿರುವ ರೋಹಿತ್ ಶರ್ಮಾರನ್ನು ಸದ್ಯದಲ್ಲೇ ಕಿತ್ತು ಆ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ನನ್ನು ನೇಮಿಸಲಾಗುತ್ತದೆ ಎಂದು ಸುದ್ದಿ ಹರಿದಾಡುತ್ತಿದೆ.
ರೋಹಿತ್ ಶರ್ಮಾರನ್ನು ಮುಂಬರುವ ಏಕದಿನ ವಿಶ್ವಕಪ್ ವರೆಗೆ ತಂಡದಲ್ಲಿ ಉಳಿಸಿಕೊಳ್ಳಲು ಬಿಸಿಸಿಐಗೆ ಆಸಕ್ತಿಯಿಲ್ಲ. ಹೀಗಾಗಿ ರೋಹಿತ್ ಶರ್ಮಾ ಕೆಲವೇ ಸಮಯದಲ್ಲಿ ನಿವೃತ್ತಿಯಾಗಬಹುದು ಎನ್ನಲಾಗಿದೆ. ರೋಹಿತ್ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ರನ್ನು ನಾಯಕನಾಗಿ ನೇಮಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಟಿ20 ತಂಡಕ್ಕೆ ಈಗಾಗಲೇ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದರೆ ಟೆಸ್ಟ್ ತಂಡಕ್ಕೆ ಶುಭಮನ್ ಗಿಲ್ ನಾಯಕರಾಗಿ ಕ್ಲಿಕ್ ಆಗಿದ್ದಾರೆ. ಹೀಗಾಗಿ ಏಕದಿನ ತಂಡಕ್ಕೆ ಶ್ರೇಯಸ್ ರನ್ನು ನಾಯಕನಾಗಿ ನೇಮಿಸುವ ಸಾಧ್ಯತೆಯಿದೆ.