Publish Date: Sat, 31 Aug 2024 (12:27 IST)
Updated Date: Sat, 31 Aug 2024 (12:33 IST)
ಮುಂಬೈ: ಟೀಂ ಇಂಡಿಯಾ ವಾಲ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಈಗ ಅಪ್ಪನ ಹಾದಿಯಲ್ಲಿದ್ದಾರೆ. ಭಾರತದ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಅಂಡರ್ 19 ಸರಣಿಗೆ ಭಾರತದ ಕಿರಿಯರ ತಂಡ ಆಯ್ಕೆ ಮಾಡಲಾಗಿದ್ದು ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಕೂಡಾ ಆಯ್ಕೆಯಾಗಿದ್ದಾರೆ. ಈ ಸರಣಿಯಲ್ಲಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ತಂಡದಲ್ಲಿ ಸಮಿತ್ ಆಯ್ಕೆಯಾಗಿರುವುದು ವಿಶೇಷ.
ಏಕದಿನ ತಂಡದ ನಾಯಕನಾಗಿ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಮಾನ್, ಟೆಸ್ಟ್ ತಂಡಕ್ಕೆ ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ನಾಯಕರಾಗಿದ್ದಾರೆ. ಈ ತಂಡದಲ್ಲಿ ಸಮಿತ್ ದ್ರಾವಿಡ್ ಅಲ್ಲದೆ, ಕರ್ನಾಟಕದಿಂದ ಕಾರ್ತಿಕೇಯ ಕೆಪಿ, ಸಮರ್ಥ್, ಹಾರ್ದಿಕ್ ರಾಜ್ ಕೂಡಾ ಆಯ್ಕೆಯಾಗಿದ್ದಾರೆ.
ವಿಶೇಷವೆಂದರೆ ರಾಹುಲ್ ದ್ರಾವಿಡ್ ಕೂಡಾ ಇದೇ ಅಂಡರ್ 19 ತಂಡದ ಕೋಚ್ ಆಗಿ ಹಲವು ಯುವ ಕ್ರಿಕೆಟಿಗರನ್ನು ಭಾರತ ತಂಡಕ್ಕೆ ಕೊಡುಗೆಯಾಗಿ ನೀಡಿದ್ದರು. ಇದೀಗ ಅದೇ ತಂಡಕ್ಕೆ ಪುತ್ರ ಸಮಿತ್ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಮುಂದೆ ರಾಷ್ಟ್ರೀಯ ತಂಡ ಸೇರಿಕೊಳ್ಳುವ ನಿಟ್ಟಿನಲ್ಲಿ ಸಮಿತ್ ಗೆ ಇದು ಮೊದಲ ಹೆಜ್ಜೆಯಾಗಿರಲಿದೆ.