Publish Date: Sat, 07 Sep 2024 (16:44 IST)
Updated Date: Sat, 07 Sep 2024 (16:47 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತ ಎ ತಂಡದ ವಿರುದ್ಧದ ಪಂದ್ಯದಲ್ಲಿ ಬಿ ತಂಡದ ಪರ ಆಡುತ್ತಿರುವ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಇದು ಕೆಎಲ್ ರಾಹುಲ್ ಅಭಿಮಾನಿಗಳಲ್ಲಿ ಆತಂಕ ತಂದಿದೆ.
ಈ ದುಲೀಪ್ ಟ್ರೋಫಿ ಪಂದ್ಯದ ಪ್ರದರ್ಶನವನ್ನಾಧರಿಸಿ ಮುಂಬರುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗುತ್ತದೆ. ಇಂದು ಕೆಎಲ್ ರಾಹುಲ್ ತಮ್ಮ ತವರು ಮೈದಾನದಲ್ಲೇ ಕೆಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 37 ರನ್ ಗಳಿಸಲು ಬರೋಬ್ಬರಿ 111 ಎಸೆತ ಎದುರಿಸಿದ್ದರು.
ಆದರೆ ರಿಷಬ್ ಪಂತ್ ತಮ್ಮ ಬೀಡು ಬೀಸಾದ ಶೈಲಿಯ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಬ್ ಕೆಳ ಕ್ರಮಾಂಕದಲ್ಲಿ ಇಂತಹ ಬ್ಯಾಟಿಂಗ್ ಗೇ ಹೆಸರುವಾಸಿ. ಅಪಘಾತದ ಬಳಿಕ ಒಂದು ವರ್ಷ ಕ್ರಿಕೆಟ್ ನಿಂದ ದೂರವಿದ್ದ ರಿಷಬ್ ಇತ್ತೀಚೆಗೆ ಟಿ20 ವಿಶ್ವಕಪ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿದ್ದರು.
ಇಂದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಒಟ್ಟು 47 ಎಸೆತ ಎದುರಿಸಿದ ಅವರು 61 ರನ್ ಚಚ್ಚಿ ಔಟಾದರು. ಅವರ ಈ ಇನಿಂಗ್ಸ್ ಆಯ್ಕೆಗಾರರನ್ನು ಇಂಪ್ರೆಸ್ ಮಾಡಲಿದೆ. ಆದರೆ ಅತ್ತ ಕೆಎಲ್ ರಾಹುಲ್ ರನ್ ಗಳಿಸಲು ತಿಣುಕಾಡಿರುವುದರಿಂದ ಅವರು ಮುಂಬರುವ ಟೆಸ್ಟ್ ಸರಣಿಗೆ ಆಯ್ಕೆಯಾಗುತ್ತಾರೋ ಇಲ್ಲವೋ ಎಂಬ ಆತಂಕ ಶುರುವಾಗಿದೆ.