Publish Date: Wed, 15 Sep 2021 (12:05 IST)
Updated Date: Wed, 15 Sep 2021 (08:56 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ರನ್ನು ಕಡೆಗಣಿಸಿದ್ದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಅನೇಕರಿಗೆ ಅಸಮಾಧಾನವಿದೆ. ಇದೇ ರೀತಿ ಕೊಹ್ಲಿ ನಾಯಕತ್ವದಲ್ಲಿ ಸ್ಪಿನ್ನರ್ ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿಲ್ಲವಾ ಎಂಬ ಅನುಮಾನ ಮೂಡಿದೆ.
ಧೋನಿ ನಾಯಕರಾಗಿದ್ದಾಗ ಸ್ಪಿನ್ನರ್ ಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದರು. ಕೆಲವೊಮ್ಮೆ ಸ್ಪಿನ್ನರ್ ಗಳಿಂದಲೇ ಇನಿಂಗ್ಸ್ ಆರಂಭಿಸುತ್ತಿದ್ದರು. ಅವರ ನಾಯಕತ್ವವಿದ್ದಾಗ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾರಂತಹ ಪ್ರತಿಭೆಗಳು ಮಿಂಚಿದ್ದರು.
ಆದರೆ ಈಗ ಕೊಹ್ಲಿ ನಾಯಕತ್ವದಲ್ಲಿ ವೇಗಿಗಳಿಗೇ ಹೆಚ್ಚು ಮಣೆ ಹಾಕಲಾಗುತ್ತಿದೆ. ಇದರಿಂದಾಗಿ ಟೀಂ ಇಂಡಿಯಾದಲ್ಲಿ ಪ್ರತಿಭಾವಂತ ವೇಗಿಗಳ ಹೊಸ ತಂಡವನ್ನೇ ಕಟ್ಟಬಹುದು. ಅಷ್ಟೊಂದು ಸಂಖ್ಯೆಯಲ್ಲಿ ವೇಗದ ಬೌಲರ್ ಗಳಿದ್ದಾರೆ. ಆದರೆ ಸ್ಪಿನ್ನರ್ ಗಳಿಗೆ ಜಾಗವಿಲ್ಲದಂತಾಗಿದೆ. ರವಿಚಂದ್ರನ್ ಅಶ್ವಿನ್ ಮಾತ್ರವಲ್ಲ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ರಂತಹ ಪ್ರತಿಭೆಗಳು ಈಗ ಸ್ಥಾನ ಪಡೆಯುವುದೇ ಅಪರೂಪವಾಗಿದೆ. ಹೀಗಾಗಿಯೇ ಒಂದು ಕಾಲದಲ್ಲಿ ಸ್ಪಿನ್ನರ್ ಗಳಿಗೆ ಹೆಸರು ವಾಸಿಯಾಗಿದ್ದ ಭಾರತ ತಂಡದಲ್ಲಿ ಈಗ ವಿಕೆಟ್ ಕೀಳಬಲ್ಲ ಸ್ಪಿನ್ನರ್ ಗಳ ಕೊರತೆ ಕಾಣುತ್ತಿದೆ.