Publish Date: Sat, 27 Oct 2018 (08:15 IST)
Updated Date: Sat, 27 Oct 2018 (08:16 IST)
ಪುಣೆ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಪುಣೆಯಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಕುಲದೀಪ್ ಯಾದವ್ ವಿಶ್ವದಾಖಲೆ ಮಾಡುವ ಕನಸಿನಲ್ಲಿದ್ದಾರೆ.
ಈ ವರ್ಷ ಯಶಸ್ವಿ ಬೌಲರ್ ಎನಿಸಿದ್ದ ಕುಲದೀಪ್ ಯಾದವ್ ಇದುವರೆಗೆ ಒಟ್ಟು 16 ಪಂದ್ಯಗಳಿಂದ 39 ವಿಕೆಟ್ ಕಬಳಿಸಿದ್ದಾರೆ. ಇನ್ನು ಮೂರು ವಿಕೆಟ್ ಕಿತ್ತರೆ ಈ ವರ್ಷ ಅತ್ಯಂತ ಹೆಚ್ಚು ವಿಕೆಟ್ ಕಿತ್ತ ಇಂಗ್ಲೆಂಡ್ ನ ಆದಿಲ್ ರಶೀದ್ ದಾಖಲೆಯನ್ನು ಕುಲದೀಪ್ ಹಿಂದಿಕ್ಕಲಿದ್ದಾರೆ.
ಸದ್ಯಕ್ಕೆ ಟೀಂ ಇಂಡಿಯಾಕ್ಕೆ ಅಂತಹದ್ದೊಂದು ಬೌಲಿಂಗ್ ಪರ್ಫಾರ್ಮೆನ್ಸ್ ನ ಅಗತ್ಯವಿದೆ. ಕಳೆದೆರಡು ಪಂದ್ಯಗಳಲ್ಲಿ ಬೌಲರ್ ಗಳು ಮಂಕಾಗಿದ್ದು ಟೀಂ ಇಂಡಿಯಾ ತಲೆನೋವಿಗೆ ಕಾರಣವಾಗಿದೆ. ವಿಂಡೀಸ್ ನ ಹೋಪ್ ಮತ್ತು ಶಿಮ್ರೋನ್ ಹೆಟ್ ಮೇರ್ ಗೆ ಕಡಿವಾಣ ಹಾಕುವುದು ಭಾರತೀಯರಿಗೆ ಸವಾಲಾಗಿದೆ.
ಈ ಪಂದ್ಯಕ್ಕೆ ಖಾಯಂ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಮರಳಿರುವುದರಿಂದ ಬೌಲಿಂಗ್ ವಿಭಾಗಕ್ಕೆ ಬಲ ಬಂದಂತಾಗಿದೆ. ಇನ್ನು ಆರಂಭಿಕ ಶಿಖರ್ ಧವನ್ ಫಾರ್ಮ್ ಗೆ ಮರಳಲೇಬೇಕಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಅವರು ವಿಫಲರಾಗಿದ್ದಾರೆ. ಇತ್ತ ಧೋನಿಯೂ ರನ್ ಗಳಿಸುವ ಒತ್ತಡದಲ್ಲಿದ್ದಾರೆ. ಟಾಸ್ ಗೆದ್ದರೆ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.