Publish Date: Thu, 11 Jul 2024 (09:10 IST)
Updated Date: Thu, 11 Jul 2024 (09:23 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ತಮ್ಮ ಜೊತೆಗೆ ಸಹಾಯಕ ಸಿಬ್ಬಂದಿಗಳ ಸಮೂಹವನ್ನೂ ತಾವೇ ಆಯ್ಕೆ ಮಾಡಲಿದ್ದಾರೆ. ಅವರ ಕೋಚಿಂಗ್ ಸಿಬ್ಬಂದಿ ಬಳಗದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದು ಈಗ ಬಯಲಾಗಿದೆ.
ರಾಹುಲ್ ದ್ರಾವಿಡ್ ರಿಂದ ತೆರವಾದ ಸ್ಥಾನಕ್ಕೆ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ತಂಡಕ್ಕೆ ಬಂದಿದ್ದಾರೆ. ದ್ರಾವಿಡ್ ಅವಧಿಯಲ್ಲಿ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಟಿ ದಿಲೀಪ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಟಿ ದಿಲೀಪ್ ಭಾರತದ ಫೀಲ್ಡಿಂಗ್ ನಲ್ಲಿ ಗಮನಾರ್ಹ ಬದಲಾವಣೆ ತಂದಿದ್ದರು.
ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಬದಲಾವಣೆಯಾಗಲಿದ್ದಾರೆ. ಟೀಂ ಇಂಡಿಯಾದಲ್ಲಿ ಇದುವರೆಗೆ ಬ್ಯಾಟಿಂಗ್ ಕೋಚ್ ಆಗಿ ವಿಕ್ರಮ್ ರಾಥೋಡ್ ಕಾರ್ಯನಿರ್ವಹಿಸುತ್ತಿದ್ದರು. ವಿಕ್ರಮ್ ಕಳೆದ ಮೂರು ವರ್ಷಗಳಿಂದ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಅವರು ಈಗ ಹುದ್ದೆ ಕಳೆದುಕೊಳ್ಳಲಿದ್ದಾರೆ. ಸ್ವತಃ ಗಂಭೀರ್ ಬ್ಯಾಟಿಂಗ್ ಕೋಚ್ ನ ಜವಾಬ್ಧಾರಿ ನಿಭಾಯಿಸಲಿದ್ದಾರೆ ಎನ್ನಲಾಗಿದೆ.
ಇನ್ನು, ತಂಡದ ಬೌಲಿಂಗ್ ಕೋಚ್ ಆಗಿ ದ್ರಾವಿಡ್ ಅವಧಿಯಲ್ಲಿ ಪರಸ್ ಮಾಂಬ್ರೆ ಕಾರ್ಯನಿರ್ವಹಿಸಿದ್ದರು. ಆದರೆ ಈಗ ಅವರೂ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ವಿನಯ್ ಕುಮಾರ್, ಲಕ್ಷ್ಮೀಪತಿ ಬಾಲಾಜಿಯವರ ಹೆಸರು ಕೇಳಿಬರುತ್ತಿದೆ. ಇವರಿಬ್ಬರೂ ಕೆಕೆಆರ್ ತಂಡದಲ್ಲಿ ಗಂಭೀರ್ ಜೊತೆ ಕೋಚ್ ಗಳಾಗಿ ಕೆಲಸ ಮಾಡಿದ್ದರು.
ಪ್ರಮುಖವಾಗಿ ಗಂಭಿರ್ ಗೆ ಸಹಾಯಕ ಕೋಚ್ ಆಗಿ ಕೆಕೆಆರ್ ತಂಡದ ಅಭಿಷೇಕ್ ನಾಯರ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬ ಮಾತುಗಳಿವೆ. ಅಭಿಷೇಕ್ ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆಗೂ ಉತ್ತಮ ಬಾಂಧವ್ಯವಿದೆ. ಹೀಗಾಗಿ ಇವರಿಬ್ಬರ ಕಾಂಬಿನೇಷನ್ ಕೆಲಸ ಮಾಡಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.