Publish Date: Fri, 09 Feb 2024 (17:12 IST)
Updated Date: Fri, 09 Feb 2024 (17:20 IST)
ಮುಂಬೈ: ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ತಂಡದ ಆಯ್ಕೆಗೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಎಲ್ ರಾಹುಲ್ ತೊಡೆ ನೋವಿನಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಅವರ ಮತ್ತು ರವೀಂದ್ರ ಜಡೇಜಾ ಫಿಟ್ನೆಸ್ ವರದಿಗಾಗಿಯೇ ಆಯ್ಕೆ ಸಮಿತಿ ಕಾದು ಕುಳಿತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇದುವರೆಗೆ ಅಂತಿಮ ಮೂರು ಟೆಸ್ಟ್ ಪಂದ್ಯಗಳಿಗೆ ತಂಡದ ಆಯ್ಕೆಯಾಗಿಲ್ಲ.
ಈ ನಡುವೆ ಕೆಎಲ್ ರಾಹುಲ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರೀ ಲಗೇಜ್ ಕೂಡಾ ಅವರ ಜೊತೆಗಿತ್ತು ಎನ್ನುವುದು ವಿಶೇಷ. ಈ ವೇಳೆ ಅವರು ಪಪ್ಪಾರಾಜಿಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಬದಲಿಗೆ ಸೆಲ್ಫೀಗೆ ಪೋಸ್ ಕೊಟ್ಟು ಅಲ್ಲಿಂದ ತೆರಳಿದ್ದಾರೆ.
ಮುಂದಿನ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಕೂಡಾ ಗಾಯದಿಂದಾಗಿ ಅಲಭ್ಯರಾಗಿದ್ದಾರೆ. ಹೀಗಾಗಿ ರಾಹುಲ್ ಕಮ್ ಬ್ಯಾಕ್ ಮಾಡುವುದು ತಂಡಕ್ಕೆ ಮುಖ್ಯವಾಗಿದೆ. ಫೆಬ್ರವರಿ 15 ರಿಂದ ರಾಜ್ ಕೋಟ್ ನಲ್ಲಿ ಎರಡನೇ ಟೆಸ್ಟ್ ಆರಂಭವಾಗಲಿದ್ದು, ಆ ವೇಳೆ ರಾಹುಲ್ ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ.