ಬೆಂಗಳೂರು: ದೇಶೀಯ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿ ಇದೀಗ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಕನ್ನಡಿಗ ಕರುಣ್ ನಾಯರ್ ಹೊಸ ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ.
ಭಾರತ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ಬಹುವರ್ಷಗಳ ಕನಸು ನನಸಾಗಿದೆ. ಇಂದು ಲೀಡ್ಸ್ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಕರುಣ್ ಸಿದ್ಧ ಎಂದು ಬಿಸಿಸಿಐ ಹೇಳಿದೆ. ಹೀಗಾಗಿ, ಹನ್ನೊಂದರ ಬಳಗದಲ್ಲಿ ಅವರು ಕಣಕ್ಕೆ ಇಳಿಯುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
ಕರುಣ್ ಅವರು 2016ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರ. ಚೆನ್ನೈನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಅಜೇಯ 303 ರನ್ ಗಳಿಸಿ ಎಲ್ಲರ ಗಮನ ಸೆಳೆದರು. ವೀರೇಂದ್ರ ಸೆಹ್ವಾಗ್ ಬಿಟ್ಟರೆ ತ್ರಿಶತಕ ಹೊಡೆದ ಭಾರತದ ಎರಡನೇ ಆಟಗಾರ ಅವರಾಗಿದ್ದಾರೆ.
2017ರಿಂದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ 33 ವರ್ಷದ ಕರುಣ್ ನಂತರ ದೇಶಿಯ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡರು. ಕಳೆದ ಎರಡು ವರ್ಷಗಳಲ್ಲಿ ರಣಜಿ ಸೇರಿದಂತೆ ದೇಶಿ ಟೂರ್ನಿಗಳಲ್ಲಿ ಮಿಂಚು ಹರಿಸಿರುವ ಅವರು ಟೆಸ್ಟ್ ತಂಡಕ್ಕೆ ಮರಳಿದ್ದಾರೆ.
ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವುದು ಕರುಣ್ ನಾಯರ್ ಅವರು ತಂಡಕ್ಕೆ ಮರಳುವಿಕೆಗೆ ಅವಕಾಶ ನೀಡಿದೆ. 2002ರ ನಂತರ ಶುಭಮನ್ ಗಿಲ್ ಅವರ ಹೊಸ ನಾಯಕತ್ವದಲ್ಲಿ ಹೆಡಿಂಗ್ಲಿಯಲ್ಲಿ ಭಾರತ ತನ್ನ ಮೊದಲ ಟೆಸ್ಟ್ ಗೆಲುವಿನ ನಿರೀಕ್ಷೆಯಲ್ಲಿದೆ.