Publish Date: Fri, 23 Feb 2024 (09:40 IST)
Updated Date: Fri, 23 Feb 2024 (09:45 IST)
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಟೀಂ ಇಂಡಿಯಾ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿಕೊಂಡಿದೆ. ಜಸ್ಪ್ರೀತ್ ಬುಮ್ರಾಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಿರುವುದರಿಂದ ಯುವ ವೇಗಿ ಆಕಾಶ್ ದೀಪ್ ಗೆ ಚೊಚ್ಚಲ ಅವಕಾಶ ನೀಡಿದೆ. ಅವರಿಗೆ ಕೋಚ್ ರಾಹುಲ್ ದ್ರಾವಿಡ್ ಕ್ಯಾಪ್ ನೀಡಿ ಗೌರವಿಸಿದರು.
ಆದರೆ ಕಳೆದ ಎರಡೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ರಜತ್ ಪಾಟೀದಾರ್ ಗೆ ಇನ್ನೊಂದು ಅವಕಾಶ ನೀಡಲಾಗಿದೆ. ಇದರಿಂದಾಗಿ ಕನ್ನಡಿಗ ದೇವದತ್ತ್ ಪಡಿಕ್ಕಲ್ ಬೆಂಚ್ ಕಾಯಿಸಬೇಕಿದೆ. ಉಳಿದಂತೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಯಿಲ್ಲ.
ಆಕಾಶ್ ದೀಪ್ ಸಿಂಗ್ ಹಿನ್ನಲೆ
ಟೀಂ ಇಂಡಿಯಾಕ್ಕೆ ಇಂದು ಪದಾರ್ಪಣೆ ಮಾಡಿದ 27 ವರ್ಷದ ಆಕಾಶ್ ದೀಪ್ ಹುಟ್ಟಿದ್ದು ಬಿಹಾರದಲ್ಲಿ. ಆದರೆ ಬಂಗಾಳ ತಂಡದ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮಧ್ಯಮ ವೇಗಿಯಾಗಿರುವ ಆಕಾಶ್ ದೀಪ್ ಬಲಗೈ ಬ್ಯಾಟಿಗ ಕೂಡಾ. ಐಪಿಎಲ್ ನಲ್ಲಿ 7 ಪಂದ್ಯವಾಡಿದ 6 ವಿಕೆಟ್ ಕಬಳಿಸಿದ್ದಾರೆ. ಇತ್ತೀಚೆಗೆ ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ 10 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದ್ದರು. ಇದೇ ಕಾರಣಕ್ಕೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.