Publish Date: Thu, 22 Feb 2024 (14:41 IST)
Updated Date: Thu, 22 Feb 2024 (14:43 IST)
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಿಂದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿರುವುದರ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ.
ಸರಣಿಯಲ್ಲಿ ಇನ್ನೂ ಎರಡು ಪಂದ್ಯ ಬಾಕಿಯಿದ್ದು, ಭಾರತ 2-1 ರಿಂದ ಮುನ್ನಡೆಯಲ್ಲಿದೆಯಷ್ಟೇ. ಸರಣಿ ಗೆಲ್ಲಲು ಇನ್ನೂ ಒಂದು ಪಂದ್ಯ ಗೆಲ್ಲಲೇಬೇಕಾದ ಸನ್ನಿವೇಶವಿದೆ. ಮುಂಬರುವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ಈ ಸರಣಿ ಗೆಲ್ಲುವುದು ಭಾರತಕ್ಕೆ ಅನಿವಾರ್ಯ ಕೂಡಾ. ಹಾಗಿದ್ದರೂ ಇಂತಹ ಮಹತ್ವದ ಸಂದರ್ಭದಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.
ಸತತ ಕ್ರಿಕೆಟ್ ನಿಂದ ಬಳಲಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಗಮನಿಸಿದರೆ ಮುಂಬರುವ ಐಪಿಎಲ್ ಕ್ರೀಡಾಕೂಟಕ್ಕಾಗಿಯೇ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆಯೇ ಎಂಬ ಅನುಮಾನ ಮೂಡಿದೆ.
ಡಬ್ಲ್ಯುಟಿಸಿ ಅಂಕಪಟ್ಟಿಯ ದೃಷ್ಟಿಯಿಂದ ಈ ಸರಣಿ ಗೆಲುವು ಭಾರತಕ್ಕೆ ಅನಿವಾರ್ಯ ಎನ್ನುವುದು ನಮಗೆ ಗೊತ್ತು. ಆದರೆ ಮುಂದೆ ಐಪಿಎಲ್ ಬರಲಿದ್ದು, ಬುಮ್ರಾ ಸತತವಾಗಿ ಕ್ರಿಕೆಟ್ ಆಡಬೇಕಿದೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆಯಷ್ಟೇ ಹೊರತು, ದೈಹಿಕವಾಗಿ ಅವರು ಫಿಟ್ ಆಗಿದ್ದಾರೆ ಎಂದಿದ್ದಾರೆ. ಹಾಗಿದ್ದರೆ ರಾಷ್ಟ್ರೀಯ ತಂಡಕ್ಕಿಂತಲೂ ಐಪಿಎಲ್ ನಲ್ಲಿ ಆಡುವುದು ಮುಖ್ಯವೇ ಎಂಬ ಅನುಮಾನ ಮೂಡಿದೆ.
ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು, ಪಿಚ್ ನಲ್ಲಿ ಬಿರುಕು ಇದೆ. ಹೀಗಾಗಿ ಇದು ಸ್ಪಿನ್ನರ್ ಗಳಿಗೆ ನೆರವಾಗುವ ಪಿಚ್ ಎನ್ನಲಾಗಿದೆ. ಹೀಗಾಗಿ ಬುಮ್ರಾ ಅನುಪಸ್ಥಿತಿ ಕಾಡದು ಎನ್ನುವುದು ಟೀಂ ಇಂಡಿಯಾ ವಿಶ್ವಾಸವಾಗಿದೆ.