ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಬ್ಯಾಟಿಂಗ್ ಮಾಡುವಾಗ ಗಾಯ ಮಾಡಿಕೊಂಡಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಭ್ ಪಂತ್ ಸರಣಿಯಿಂದಲೇ ಔಟ್ ಆಗಿದ್ದಾರೆ.
ನಿನ್ನೆ ಕ್ರಿಸ್ ವೋಕ್ಸ್ ಬೌಲಿಂಗ್ ಎದುರಿಸುವಾಗ ರಿಷಭ್ ಪಾದಕ್ಕೆ ಚೆಂಡು ಬಡಿದು ಗಾಯವಾಗಿತ್ತು. ಆಗಲೇ ರಿಷಭ್ ಪಾದ ಊದಿಕೊಂಡು ರಕ್ತ ಸೋರುತ್ತಿತ್ತು. ತೀವ್ರ ನೋವಿಗೊಳಗಾಗಿದ್ದ ಅವರನ್ನು ತಕ್ಷಣವೇ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು.
ಇದೀಗ ಅವರ ವೈದ್ಯಕೀಯ ವರದಿ ಬಂದಿದ್ದು ಕಾಲ ಬೆರಳ ಮುರಿತವಾಗಿದೆ ಎಂದು ತಿಳಿದುಬಂದಿದೆ. ಗಾಯ ಗಂಭೀರವಾಗಿರುವ ಕಾರಣ ಈ ಪಂದ್ಯ ಮಾತ್ರವಲ್ಲ ಮುಂದಿನ ಪಂದ್ಯದಿಂದಲೂ ಅವರು ಹೊರಗುಳಿಯಬೇಕಾಗಿದೆ.
ಈ ಸರಣಿಯಲ್ಲಿ ರಿಷಭ್ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರು. ನಿನ್ನೆಯ ಪಂದ್ಯದಲ್ಲೂ ಉತ್ತಮವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಈಗ ಅವರು ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಲಿದೆ.